ಮಂಗಳೂರು: ಐದು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ತಂಗಿಯ ಒಡವೆಗಳನ್ನು ಕಳ್ಳತನ ಮಾಡಿ ಅಕ್ಕ ಪರಾರಿಯಾಗಿರುವ ಘಟನೆ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಒಡವೆಯೊಂದಿಗೆ ಪರಾರಿಯಾದ ಯುವತಿಯನ್ನು ರಿಜ್ವಾನಾ ಎನ್ನಲಾಗಿದೆ.
ಹಿರಿಯ ಪುತ್ರಿ ರಿಜ್ವಾನಾ ಶಿಕ್ಷಕಿಯಾಗಿದ್ದಳು. ಆಕೆಯ ಗಂಡ ದುಬೈನಲ್ಲಿರುವುದರಿಂದ ತನ್ನ ತಂದೆಯ ಮನೆಯಲ್ಲಿಯೇ ವಾಸವಿದ್ದಳು.ರಿಜ್ವಾನಾಳ ತಂಗಿ ರಾಝಿ ಅವರಿಗೆ ಮಾರ್ಚ್ ತಿಂಗಳಲ್ಲಿ ಮದುವೆಯಾಗಿತ್ತು. ಆಕೆಯ ಒಡವೆಗಳು ತಂದೆಯ ಮನೆಯಲ್ಲಿಯೇ ಇದ್ದವು. ಅಲ್ಲದೇ ಆ ಒಡವೆಗಳಿದ್ದ ಕಪಾಟಿನ ಕೀ ಹಿರಿಯ ಮಗಳು ರಿಜ್ಞಾನಾಳ ಬಳಿಯೇ ಇತ್ತು ಎನ್ನಲಾಗಿದೆ.
ಇಬ್ರಾಹಿಂ ಅವರಿಗೆ ಹಣದ ಅವಶ್ಯಕತೆ ಇದ್ದ ಕಾರಣ ಜುಲೈ 26 ರಂದು ಬೆಳಗ್ಗೆ ಅವರು ಒಡವೆಗಳನ್ನು ಅಡವಿರಿಸಲು ಕಪಾಟಿನ ಕೀಯನ್ನು ಹಿರಿಯ ಪುತ್ರಿ ರಿಜ್ವಾನಾ ಬಳಿ ಕೇಳಿದಾಗ ಆಕೆ ಕೊಡಲು ನಿರಾಕರಿಸಿದಳು.
ಆ ಬಳಿಕ ರಿಜ್ವಾನಾ ತಾನು ಚೊಕ್ಕಬೆಟ್ಟುವಿನ ಜಾಮೀಯಾ ಇಂಗ್ಲೀಷ್ ಮೀಡಿಯಂ ಶಾಲೆಗೆ ಹೋಗುತ್ತೇನೆ ಎಂದು ಹೇಳಿ ಹೋಗಿದ್ದು, ಅಲ್ಲದೇ ಆಕೆ ತನ್ನ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿ ಪರಾರಿಯಾಗಿದ್ದಾಳೆ.
ಮರುದಿನ ಇಬ್ರಾಹಿಂ ಅವರು ಕಪಾಟಿನ ಬಾಗಿಲು ಒಡೆದು ನೋಡಿದಾಗ ಅದರಲ್ಲಿ ಒಡವೆಗಳು ಇರಲಿಲ್ಲ ಎಂದು ತಿಳಿದುಬಂದಿದೆ. ವಿವಾಹಿತೆ ರಿಜ್ವಾನಾಳಿಗೆ ಕೃಷ್ಣಾಪುರದ ಬಶೀರ್ ಎಂಬಾತನೊಂದಿಗೆ ಪ್ರೇಮಾಂಕುರವಾಗಿತ್ತು. ಆತನೊಂದಿಗೆ ಪರಾರಿಯಾಗಿದ್ದಾಳೆಂದು ತಂದೆ ಇಬ್ರಾಹಿಂ ಅವರು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.