ಕರ್ನಾಟಕದ ಮೊದಲ ವಿಸ್ಟಾಡಾಮ್ ಕೋಚ್ ರೈಲಿಗೆ ಮಂಗಳೂರಿನಲ್ಲಿ ಚಾಲನೆ ನೀಡಲಾಗಿದೆ. ಪ್ರವಾಸೋದ್ಯಮವನ್ನು ಆಕರ್ಷಕವಾಗಿಸಲು ಈ ವಿನೂತನ ಯೋಜನೆಯನ್ನು ಆರಂಭಿಸಲಾಗಿದೆ. ಮಂಗಳೂರಿನಿಂದ ಹೊರಟ ರೈಲು ಬೆಂಗಳೂರಿನ ಯಶವಂತಪುರ ತಲುಪಲಿದೆ. ಮಂಗಳೂರು-ಬೆಂಗಳೂರು ನಡುವಿನ ಹಗಲು ರೈಲಿಗೆ ಎರಡು ವಿಸ್ಟಾಡಾಮ್ ಕೋಚ್ ಅವಳವಡಿಕೆ ಮಾಡಲಾಗಿದೆ. ಭಾನುವಾರ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಈ ರೈಲಿಗೆ ಚಾಲನೆ ನೀಡಿದರು.
ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ನಡೆದ ಸಮಾರಂಭದಲ್ಲಿ ವಿಸ್ಟಾಡಾಮ್ ಕೋಚ್ ಅಳವಡಿಕೆ ಮಾಡಿರುವ ರೈಲು ಸಂಚಾರ ಆರಂಭಿಸಿತು. ಮಂಗಳೂರು-ಯಶವಂತಪುರ ನಡುವಿನ ಹಗಲು ರೈಲು (06540/06539) ವಿಸ್ಟಾಡಾಮ್ ಕೋಚ್ ಹೊಂದಿದೆ.
ರೈಲಿನಲ್ಲಿ ಎರಡು ವಿಸ್ಟಾಡೋಮ್ ಬೋಗಿಗಳಿದ್ದು, ಪ್ರತಿ ಬೋಗಿಯಲ್ಲಿ 44 ಆಸನ ಸಾಮರ್ಥ್ಯವಿದೆ. ಈ ಬೋಗಿಗಳು ಗಾಜಿನ ಮೇಲ್ಛಾವಣಿಯನ್ನು ಹೊಂದಿದ್ದು, ಸೀಟುಗಳು 180 ಡಿಗ್ರಿ ತಿರುಗಲಿವೆ. ರೈಲಿನಲ್ಲಿಯೇ ಕುಳಿತು ಜನರು ಪ್ರಕೃತಿ ಸೌಂದರ್ಯ ಸವಿಯಬಹುದಾಗಿದೆ.
ಮಂಗಳೂರು- ಬೆಂಗಳೂರು ನಡುವೆ ಸಂಚರಿಸುವ ಹಗಲು ರೈಲಿನಲ್ಲಿ ವಿಸ್ಟಾಡಾಮ್ ಕೋಚ್ ಅಳವಡಿಸಲಾಗಿದ್ದು, ಮೊದಲ ಪಯಣದಲ್ಲಿ 84 ಆಸನಗಳ ಪೈಕಿ 73 ಆಸನಗಳು ಭರ್ತಿಯಾಗಿವೆ. ಒಬ್ಬರಿಗೆ 1,600 ರೂ. ದರ ನಿಗದಿಪಡಿಸಲಾಗಿದೆ. ಸುಬ್ರಹ್ಮಣ್ಯ, ಸಕಲೇಶಪುರದ ಪಶ್ಚಿಮ ಘಟ್ಟ ಪ್ರದೇಶಗಳ ಅದ್ಭುತ ಸೌಂದರ್ಯ ನೋಡಲು ವಿಸ್ಟಾಡಾಮ್ ಕೋಚ್ನಲ್ಲಿ ಸಂಚಾರ ನಡೆಸಬೇಕು.