ಮಂಗಳೂರು : ಕಳೆದ ನವೆಂಬರ್ 19 ರಂದು ಸಂಭವಿಸಿದ್ದ ಕುಕ್ಕರ್ ಬಾಂಬ್ ಸ್ಪೋಟ ಕೃತ್ಯದ ಹಿಂದೆ ಪಾಕಿಸ್ತಾನದ ಐಸೀಸ್ ಗುಪ್ತಚರ ಸಂಸ್ಥೆ ಕೈವಾಡವಿರುವ ಬಗ್ಗೆ ರಾಷ್ಟ್ರೀಯ ತನಿಖಾ ದಳ ಶಂಕೆ ವ್ಯಕ್ತಪಡಿಸಿದೆ.
ನಗರದಲ್ಲಿ ಕುಕ್ಕರ್ ಬಾಂಬ್ ಸ್ಪೋಟಿಸಿದ ಉಗ್ರ ಶಾರೀಕ್ ಗೆ ಐಸೀಸ್ನೊಂದಿಗೆ ನಂಟಿರುವ ಮಾಹಿತಿ ತನಿಖೆಯಿಂದ ಬಯಲಾಗಿದ್ದು, ಒಡಿಶಾ ಮೂಲದ ವ್ಯಕ್ತಿಯ ಬಂಧನದಿಂದ ಈ ಸತ್ಯ ಹೊರಬಿದ್ದಿದೆ.
ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಪೋಟಿಸಿ ಇದೀಗ ಕಂಬಿ ಎಣಿಸುತ್ತಿರುವ ಉಗ್ರ ಶಾರೀಕ್ ನಿಂದ ವಶಪಡಿಸಿಕೊಳ್ಳಲಾದ ಮೊಬೈಲ್ ಸಿಮ್ ಕಾರ್ಡ್ ಗೆ ಒಡಿಶಾ ಮೂಲದ ವ್ಯಕ್ತಿಯ ನಂಟಿದ್ದು, ಒಡಿಸ್ಸಾದ ಜಜ್ಪುರ್ ಜಿಲ್ಲೆಯ 31 ವರ್ಷದ ಪ್ರೀತಂಕಾರ್ ನಿಂದ ಸಿಮ್ ಪೂರೈಕೆಯಾಗಿರುವುದು ತನಿಖೆಯಿಂದ ತಿಳಿದು ಬಂದಿದೆ. ಫ್ರೀ ಆ್ಯಕ್ಟಿವೇಟೆಡ್ ಸಿಮ್ ಕಾರ್ಡ್ ಹಾಗೂ ಡೆಬಿಟ್ ಕಾರ್ಡ್ ಪೂರೈಸಿದ್ದ ಪ್ರೀತಂಕಾರ್ ನನ್ನು ಒಡಿಸ್ಸಾದ ಸ್ಪೆಷಲ್ ಟಾಸ್ಕ್ ಪೋರ್ಸ್ ಬಂಧಿಸಿದ ಬೆನ್ನಲ್ಲೇ ಈ ಸತ್ಯ ಬಯಲಾಗಿದೆ. ಒಡಿಸ್ಸಾದಲ್ಲಿ ಬಂಧಿಸಲ್ಪಟ್ಟಿರುವ ಅಪರಾಧಿ ಪ್ರೀತಂಕಾರ್ ಅದೇ ಸಿಮ್ ಕಾರ್ಡ್ ಹಾಗೂ ಡೆಬಿಟ್ ಕಾರ್ಡನ್ನು ಈ ಹಿಂದೆ ಐಸೀಸ್ ಏಜೆಂಟ್ ಒಬ್ಬನಿಗೆ ನೀಡಿದ್ದು, ಅನಂತರ ಅದನ್ನು ಉಗ್ರ ಶಾರೀಕ್ ಗೆ ನೀಡಿರುವ ಮಾಹಿತಿ ತನಿಖಾಧಿಕಾರಿಗಳಿಂದ ಲಭ್ಯವಾಗಿದೆ.
ಸದ್ಯ, ಕಂಬಿಯ ಹಿಂದಿರುವ ಪ್ರೀತಂಕಾರ್ ಭಾರತದಲ್ಲಿರುವ ಪಾಕಿಸ್ತಾನದ ಐಸೀಸ್ ಏಜೆಂಟ್ ಗಳೊಂದಿಗೆ ಸಂಪರ್ಕ ಹೊಂದಿದ್ದ. ರಾಂಚಿ ಹಾಗೂ ಪಾಟ್ನಾದಲ್ಲಿ ಉಗ್ರರನ್ನು ಭೇಟಿಯಾಗಿ ಅವರಿಗೆ ಸಿಮ್ ಕಾರ್ಡ್ ಪೂರೈಕೆ ಮಾಡಿದ್ದ ಎನ್ನಲಾಗಿದೆ. 8ನೇ ತರಗತಿಯವರೆಗೆ ಶಿಕ್ಷಣ ಕಲಿತಿರುವ ಈತ ದೇಶ ವಿರೋಧಿ ಕೃತ್ಯ, ಸೈಬರ್ ವಂಚನೆಗಳಿಗೆ ಒಟಿಪಿ ಮಾರಾಟ ನಡೆಸುತ್ತಿದ್ದ ಮತ್ತು 2017ರಲ್ಲಿ ಬಯಲಾದ ಬಹುದೊಡ್ಡ ಸೈಬರ್ ವಂಚನೆಯ ಪಾಲುದಾರ ಎಂಬ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ. ಇದಿಷ್ಟೇ ಅಲ್ಲದೆ ಬ್ಯಾಂಕ್ ಅಕೌಂಟ್ ಹ್ಯಾಕಿಂಗ್, ನಕಲಿ ಸಿಮ್ ಕಾರ್ಡ್ ಮಾರಾಟದಲ್ಲೂ ಈತ ಭಾಗಿಯಾಗಿದ್ದ. ಈತನ ಮೂಲಕವೇ ಭಾರತದಲ್ಲಿರುವ ಪಾಕ್ ಐಸೀಸ್ ಏಜೆಂಟ್ ಗಳು ಸಿಮ್ ಕಾರ್ಡ್ ಪಡೆಯುತ್ತಿದ್ದರು. ಇದೀಗ ಈತನನ್ನು ತನಿಖಾಧಿಕಾರಿಗಳು ಬಂಧಿಸಿದ್ದಾರೆ.