ಬೆಂಗಳೂರು: ಕರ್ತವ್ಯ ವೇಳೆ ಮಾಸ್ಕ್ ಧರಿಸದ ಹಾಗೂ ಸಾಮಾಜಿಕ ಅಂತರ ಪಾಲಿಸದ 6 ಮಂದಿ ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಿ ಸಂಚಾರ ವಿಭಾಗದ ಡಿಸಿಪಿ ಸೌಮ್ಯಲತಾ ಆದೇಶ ಹೊರಡಿಸಿದ್ದಾರೆ.
ಜಾಲಹಳ್ಳಿ ಸಂಚಾರಿ ಠಾಣೆಯ ಎಎಸ್ಐ ಮಂಜುನಾಥಯ್ಯ, ಹೆಡ್ ಕಾನ್ಸ್ ಟೇಬಲ್ ನಾಗರಾಜು ಹಾಗೂ ಕಾನ್ಸ್ ಟೇಬಲ್ ಗಳಾದ ಪದ್ಮನಾಭ, ಮಧುಸೂದನ್, ವಿಶ್ವನಾಥ್ ಹಾಗೂ ಮಹಿಳಾ ಕಾನ್ಸ್ ಟೇಬಲ್ ಸುಜನಾ ಅಮಾನತುಗೊಂಡವರು.
ಆಗಸ್ಟ್ 11ರಂದು ಜಾಲಹಳ್ಳಿ ಸಂಚಾರ ಠಾಣೆಯ ಇನ್ಸ್ ಪೆಕ್ಟರ್ ಈ 6 ಮಂದಿ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಿದ್ದರು. ಕೋಬ್ರಾ ಡ್ಯೂಟಿಗೆ ಜಾಲಹಳ್ಳಿ ಜಂಕ್ಷನ್, ಗಂಗಮ್ಮನ ವೃತ್ತ ಹಾಗೂ ಸಾಹಿತ್ಯ ಕೂಟ ಸೇರಿದಂತೆ ಹಲವೆಡೆ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಕೊರೊನಾ ಹಿನ್ನಲೆಯಲ್ಲಿ ಮುಂಜಾಗ್ರತ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿತ್ತು. ಆದರೆ ಇದ್ಯಾವುದನ್ನು ಲೆಕ್ಕಿಸದೇ ಸಾಹಿತ್ಯ ಕೂಟ ಬಳಿಯ ಪಾರ್ಕ್ ನಲ್ಲಿ ಈ 6 ಮಂದಿ ಸಿಬ್ಬಂದಿ ಮಾಸ್ಕ್ ಧರಿಸದೇ, ಸಮಾಜಿಕ ಅಂತರ ಪಾಲಿಸದೇ ಗುಂಪು ಸೇರಿದ್ದರು. ಕರ್ತವ್ಯ ನಿರ್ಲಕ್ಷ್ಯ ಹಾಗೂ ಬೇಜಾವಾಬ್ದಾರಿ ಆರೋಪದ ಮೇರೆಗೆ 6 ಮಂದಿ ಸಿಬ್ಬಂದಿಯನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.
ಇನ್ನು ಅಮಾನತು ಅವಧಿಯಲ್ಲಿ ಖಾಸಗಿ ನೌಕರಿ ಭತ್ಯೆ ಹಾಗೂ ವ್ಯವಹಾರ ಮಾಡಿದರೆ ಜೀವನ ಭತ್ಯೆ ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.