ಶ್ರೀನಗರ: ಉಗ್ರ ಸಂಘಟನೆಗಳ ವಿರುದ್ಧ ಭಾರತೀಯ ಯೋಧರು ನಡೆಸುತ್ತಿರುವ ಕಾರ್ಯಾಚರಣೆಯಲ್ಲಿ ಭಾರೀ ಯಶಸ್ಸು ಲಭಿಸಿದ್ದು, ಕಳೆದ 72 ಗಂಟೆಯಲ್ಲಿ 12 ಮಂದಿ ಉಗ್ರರನ್ನು ಎನ್ಕೌಂಟರ್ ಮಾಡಿದ್ದೇವೆ ಎಂದು ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ತಿಳಿಸಿದ್ದಾರೆ.
ಬಿಜ್ಬೆಹರಾ ಪ್ರದೇಶದಲ್ಲಿ ನಡೆದ ಕಾರ್ಯಾಚರಣೆ ಅಂತ್ಯವಾಗಿದೆ. ಕಳೆದ 72 ಗಂಟೆಗಳ ಅವಧಿಯಲ್ಲಿ ಟ್ರಾಲ್ ಮತ್ತು ಶೋಪಿಯನ್ ಪ್ರದೇಶದಲ್ಲಿ ನಡೆದ ಬೇರೆ ಬೇರೆ ಕಾರ್ಯಾಚರಣೆಗಳಲ್ಲಿ 12 ಉಗ್ರರನ್ನು ಎನ್ಕೌಂಟರ್ ಮಾಡಿದ್ದೇವೆ.
ಬಿಜ್ಬೆಹರಾ ಎನ್ಕೌಂಟರ್ನಲ್ಲಿ ಸಾವನ್ನಪ್ಪಿರುವ ಉಗ್ರರು, ರಜೆಗೆಂದು ಮನೆಗೆ ತೆರಳಿದ್ದ ಯೋಧನನ್ನು ನಿನ್ನೆ ಗುಂಡಿಟ್ಟು ಕೊಲೆ ಮಾಡಿದ್ದರು. ಇಂದು ಒಟ್ಟು 5 ಉಗ್ರರನ್ನು ಎನ್ಕೌಂಟರ್ ಮಾಡಿದ್ದೇವೆ. ನಮ್ಮ ಕಾರ್ಯಾಚರಣೆ ಮುಂದುವರೆಯಲಿದೆ ಎಂದು ಡಿಜಿಪಿ ಮಾಹಿತಿ ನೀಡಿದರು.
ಕಾಣೆಯಾಗಿದ್ದ 14 ವರ್ಷದ ಬಾಲಕ ಕೂಡ ಉಗ್ರರೊಂದಿಗೆ ಸೇರಿಕೊಂಡಿದ್ದ. ಆತನ ಮನವೊಲಿಸಲು ಅವರ ಪೋಷಕರನ್ನು ಎನ್ಕೌಂಟರ್ ನಡೆಯುತ್ತಿದ್ದ ಪ್ರದೇಶಕ್ಕೆ ತಂದು ಮಾತನಾಡಿಸಿದ್ದೆವು. ಆದರೆ ಆತನೊಂದಿಗೆ ಇದ್ದ ಇನ್ನಿಬ್ಬರು ಉಗ್ರರು ಅವನನ್ನು ಶರಣಾಗಲು ಬಿಡಲಿಲ್ಲ. ಆದ್ದರಿಂದ ನಾವು ಕಾರ್ಯಾಚರಣೆ ನಡೆಸಿ ಮೂವರನ್ನು ಎನ್ಕೌಂಟರ್ ಮಾಡಿದ್ದೇವೆ ಎಂದು ತಿಳಿಸಿದರು.
ಶುಕ್ರವಾರ ನಡೆದ ಕಾರ್ಯಾಚರಣೆಯಲ್ಲಿ 7 ಉಗ್ರರನ್ನು ಎನ್ಕೌಂಟರ್ ಮಾಡಲಾಗಿತ್ತು. ಇದರಲ್ಲಿ ಅನ್ಸಾರ್ ಘಜ್ವಾತುಲ್ ಹಿಂದ್ ಮುಖ್ಯಸ್ಥ ಇಮ್ತಿಯಾಜ್ ಅಹ್ಮದ್ ಷಾ ಕೂಡ ಸಾವನ್ನಪ್ಪಿದ್ದಾನೆ.