ಬೆಂಗಳೂರು: ಯುವ ನಟ ಪುನೀತ್ ರಾಜ್ ಕುಮಾರ್ ಅವರ ಅಕಾಲಿಕ ನಿಧನ ಕನ್ನಡದ ಚಿತ್ರೋದ್ಯಮಕ್ಕೆ ಬರಸಿಡಿಲಿನಂತೆ ಎರಗಿದೆ. ಶುಕ್ರವಾರ ಬೆಳಗ್ಗೆ 11. 30 ಕ್ಕೆ ವಿಧಿವಶವಾಗಿರುವ ಅಪ್ಪು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಎಲ್ಲರ ಅಚ್ಚುಮೆಚ್ಚಿನ ನಟ ಪುನೀತ್ ರಾಜ್ಕುಮಾರ್ ಅವರಿಂದ ನೇತ್ರ ದಾನ ಮಾಡಲು ನಿರ್ಧರಿಸಲಾಗಿದೆ. ಇದರೊಂದಿಗೆ ನಟ ಪುನೀತ್ ಅಪ್ಪನ ಹಾದಿಯಲ್ಲೇ ಸಾಗಿದ್ದಾರೆ.
ಸ್ಯಾಂಡಲ್ವುಡ್ ಖ್ಯಾತ ನಟ ಪುನೀತ್ ರಾಜ್ಕುಮಾರ್ ನಿಧನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.
ಏರ್ಪೋರ್ಟ್ವೊಂದರಲ್ಲಿ ಪುನೀತ್ ರಾಜಕುಮಾರ್ ದಂಪತಿಯೊಟ್ಟಿಗೆ ನಿಂತುಕೊಂಡಿರುವ ಫೋಟೋ ಶೇರ್ ಮಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ವಿಧಿಯ ಕ್ರೂರ ತಿರುವೊಂದು ಪ್ರತಿಭಾವಂತ ನಟ ಪುನೀತ್ ರಾಜ್ಕುಮಾರ್ ಅವರನ್ನು ನಮ್ಮಿಂದ ಕಿತ್ತುಕೊಂಡಿದೆ. ಅವರದ್ದು ಸಾಯುವ ವಯಸ್ಸಲ್ಲ.
ಪುನೀತ್ ಅವರನ್ನು ಮುಂಬರುವ ಪೀಳಿಗೆ ಸದಾ ನೆನಪಲ್ಲಿಟ್ಟುಕೊಳ್ಳುತ್ತದೆ. ಅಂಥ ಅದ್ಭುತ ಕೆಲಸಗಳನ್ನು ಅವರು ಮಾಡಿದ್ದಾರೆ. ನಿಜಕ್ಕೂ ಅವರದ್ದು ಅದ್ಭುತ ವ್ಯಕ್ತಿತ್ವ. ಪುನೀತ್ ಸಾವಿನ ನೋವನ್ನು ಸಹಿಸಿಕೊಳ್ಳುವ ಶಕ್ತಿ ಅವರ ಕುಟುಂಬಕ್ಕೆ ಸಿಗಲಿ. ಓಂ ಶಾಂತಿ ಎಂದು ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.