ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಬೆಳಗ್ಗೆ ಗುರುದ್ವಾರಾಗೆ ಭೇಟಿ ನೀಡಿದ್ದಾರೆ. ದೆಹಲಿಯ ಸಂಸತ್ ಭವನದ ಬಳಿ ಇರುವ ಗುರುದ್ವಾರಾ ರಾಕಾಬ್ ಗಂಜ್ ಸಾಹಿಬ್ಗೆ ತರಳಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ಸಿಖ್ಖರ 10 ಧರ್ಮಗುರುಗಳಲ್ಲಿ ಒಂಭತ್ತನೆಯವರಾದ ಶ್ರೀ ಗುರು ತೇಜ್ ಬಹದ್ದೂರ್ ಜೀ ಅವರಿಗೆ ನಮನ ಸಲ್ಲಿಸಿದ್ದಾರೆ. ಪ್ರಧಾನಿಯವರ ಇಂದಿನ ಶೆಡ್ಯೂಲ್ನಲ್ಲಿ ಗುರುದ್ವಾರಾ ಭೇಟಿಯ ಉಲ್ಲೇಖವಿರಲಿಲ್ಲ ಎಂದು ವರದಿಯಾಗಿದೆ.
ದೆಹಲಿಯಲ್ಲಿ ಹಲವು ರಾಜ್ಯಗಳ ರೈತರು ಅದ್ರಲ್ಲೂ ಹೆಚ್ಚಾಗಿ ಪಂಜಾಬ್ನ ರೈತರು, ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನ(ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ ಕಾಯ್ದೆ-2020, ರೈತರ ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ-2020, ಅಗತ್ಯ ಸರಕುಗಳ ತಿದ್ದುಪಡಿ ಕಾಯ್ದೆ-2020) ವಿರೋಧಿಸಿ ಮೂರ್ನಾಲ್ಕು ವಾರಗಳಿಂದ ಪ್ರತಿಭಟನೆ ಮಾಡುತ್ತಿದ್ದಾರೆ.
ಕೇಂದ್ರ ಸರ್ಕಾರ ಹಾಗೂ ರೈತ ಸಂಘಟನೆಗಳ ನಡುವೆ ಹಲವು ಸುತ್ತಿನ ಮಾತುಕತೆ ನಡೆದರೂ ಸಫಲವಾಗಿಲ್ಲ. ಕಾಯ್ದೆಗಳಲ್ಲಿ ತಿದ್ದುಪಡಿ ಮಾಡಬಹುದೇ ವಿನಃ ಇಡೀ ಕಾನೂನನ್ನು ಹಿಂಪಡೆಯಲ್ಲ ಅಂತ ಕೇಂದ್ರ ಸರ್ಕಾರ ಹೇಳಿದೆ. ಆದ್ರೆ ಕಾಯ್ದೆ ಹಿಂಪಡೆಯುವಂತೆ ಮಾಡೇ ಮಾಡುತ್ತೇವೆ ಅಂತ ರೈತರು ಪಟ್ಟು ಹಿಡಿದಿದ್ದಾರೆ. ಇದರ ನಡುವೆ ಇಂದು ಪ್ರಧಾನಿ ಮೋದಿ ಸಿಖ್ಖರ ಪ್ರಾರ್ಥನಾ ಸ್ಥಳ ಗುರುದ್ವಾರಾ ಭೇಟಿ ನೀಡಿರುವುದು ಮಹತ್ವ ಪಡೆದುಕೊಂಡಿದೆ.