ವಿಟ್ಲ : ಪಟ್ಟಣ ಪಂಚಾಯತ್ ವ್ಯಾಪ್ತಿಯ ಮೇಗಿನಪೇಟೆ ಜಂಕ್ಷನ್ನಲ್ಲಿರುವ ಕುಡಿಯುವ ನೀರಿನ ಸಾರ್ವಜನಿಕ ಬಾವಿಯ ಪಕ್ಕದಲ್ಲೇ ದುರ್ನಾತ ಬೀರುವ ಕೊಳಚೆ ನೀರಿನ ಶೇಖರಣೆ. ರಸ್ತೆ ಬದಿಯ ಚರಂಡಿಯ ಹೂಳು ತೆಗೆಯುವ ನೆಪದಲ್ಲಿ ಮಾಡಿದ ಎಡವಟ್ಟಿನಿಂದಾಗಿ ಪರಿಸರವೆಲ್ಲಾ ದುರ್ನಾತ ಬೀರುತ್ತಿದೆ. ಮೂರುವರೆ ಅಡಿ ಆಳ ಹಾಗೂ ಮೂವತ್ತು ಅಡಿಗಳಷ್ಟು ಉದ್ದದಲ್ಲಿ ಕೊಳತೆ ನೀರು ಕಳೆದ ನಾಲ್ಕು ದಿನಗಳಿಂದ ಶೇಖರಣೆಯಾಗಿದ್ದು ಕುಡಿಯುವ ನೀರಿನ ಸಾರ್ವಜನಿಕ ಬಾವಿಯೊಳಗೆ ಇಳಿಯುತ್ತಿದೆ.
ಜವಾಬ್ದಾರಿಯುತ ಅಧಿಕಾರಿಗಳು ತಮ್ಮ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದರೆ ಇಂತಹ ಸಮಾಜ ಕಂಟಕ ಘಟನೆಗಳು ನಡೆಯುತ್ತವೆ ಎಂಬುದಕ್ಕೆ ಇದು ಸ್ಪಷ್ಟ ಉದಾಹರಣೆಯಾಗಿದೆ. ಈ ಬಗ್ಗೆ ಪ.ಪಂ.ಮುಖ್ಯಾಧಿಕಾರಿ ಗೋಪಾಲ ನಾಯ್ಕ್ ಅವರಲ್ಲಿ ಪ್ರಶ್ನಿಸಿದಾಗ ‘ನಮ್ಮಲ್ಲಿ ಹೆಲ್ತ್ ಆಫೀಸರ್ ಎಂಬುದು ಇಲ್ಲವಾದ ಕಾರಣ ಸಮಸ್ಯೆಯಾಗಿದೆ. ಎಲ್ಲವನ್ನೂ ನಾನೊಬ್ಬನೇ ನೋಡಬೇಕಾಗಿದೆ’. ಮಾರಕ ರೋಗಕ್ಕೆ ಜನ ತುತ್ತಾದರೆ ಯಾರು ಗತಿ ಎಂಬ ಪ್ರಶ್ನೆ ಕೇಳುತ್ತಿದ್ದಂತೆ ಇವತ್ತು ಸರಿ ಮಾಡಿಸುತ್ತೇನೆ ಎಂಬ ಉತ್ತರ ಹೇಳಿದ್ದಾರೆ.