ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾಗೆ ಇಂದು ವಿದ್ಯುಕ್ತ ಚಾಲನೆ ಸಿಕ್ಕಿದೆ. ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ. ಮಂಜುನಾಥ್ ಇಂದು ದಸರಾ ಮಹೋತ್ಸವವನ್ನ ಉದ್ಘಾಟಿಸಿದ್ರು. ಕಾರ್ಯಕ್ರಮದಲ್ಲಿ ಸಿಎಂ ಯಡಿಯೂರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಸೇರಿದಂತೆ ಹಲವು ಸಚಿವರು, ಶಾಸಕರು ಮತ್ತು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಭಾಗಿಯಾಗಿದ್ದರು.
ಇದಕ್ಕೂ ಮೊದಲು ಯಡಿಯೂರಪ್ಪ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ರು. ಪ್ರತಿ ಬಾರಿ ಸಿಎಂ ಹಾಗೂ ಉದ್ಘಾಟಕರು ಪೂರ್ಣಕುಂಭ ಸ್ವಾಗತದೊಂದಿಗೆ ದೇವಾಲಯ ಪ್ರವೇಶಿಸುತ್ತಿದ್ದರು. ಆದ್ರೆ ಈ ಬಾರಿ ಕೊರೊನಾ ಸಾಂಕ್ರಾಮಿಕದ ಹಿನ್ನೆಲೆ ಯಾವುದೇ ಸ್ವಾಗತವಿಲ್ಲದೆ ನೇರವಾಗಿ ದೇವಾಲಯಕ್ಕೆ ತೆರಳಿದರು. ಡಾ.ಮಂಜುನಾಥ್ಗೆ ಯಡಿಯೂರಪ್ಪ ಮೈಸೂರು ಪೇಟ ತೊಡಿಸಿ, ಶಾಲು, ಹಾರ ಹಾಕಿ ಸನ್ಮಾನಿಸಿದರು. ಜೊತೆಗೆ 6 ಕೊರೊನಾ ವಾರಿಯರ್ಸ್ಗೆ ಸನ್ಮಾನಿಸಿ ಗೌರವ ಸಲ್ಲಿಸಿದರು.
ಕೊರೊನಾ ಹಿನ್ನಲೆಯಲ್ಲಿ ಕೇವಲ ಆಯ್ದ 200 ಮಂದಿಗೆ ಮಾತ್ರ ದಸರಾ ಉದ್ಘಾಟನೆಯ ಸ್ಥಳವಾದ ಚಾಮುಂಡಿ ಬೆಟ್ಟಕ್ಕೆ ಪ್ರವೇಶ ನೀಡಲಾಗಿದೆ. ಜನಪ್ರತಿನಿಧಿಗಳು, ದಸರಾ ಉದ್ಘಾಟಕರು, ಸನ್ಮಾನಿತರು, ಮಾಧ್ಯಮ ಪ್ರತಿನಿಧಿಗಳು, ಆಗಮಿಕರು, ಪ್ರಧಾನ ಅರ್ಚಕರು, ಗಣ್ಯರು ಮಾತ್ರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.
ಇಂದಿನಿಂದ 9 ದಿನಗಳ ಕಾಲ ಖಾಸಗಿ ದರ್ಬಾರ್ ನಡೆಯಲಿದೆ. ಈ ಹಿನ್ನೆಲೆ ಅರಮನೆಗೆ ಸಾರ್ವಜನಿಕರು ಹಾಗೂ ರಾಜ ಪರಿವಾರದವರಿಗೂ ಪ್ರವೇಶ ನಿರ್ಬಂಧಿಸಲಾಗಿದೆ. ಕುಟುಂಬದ ಆಯ್ದ ಜನರಿಗೆ ಮಾತ್ರ ಆಹ್ವಾನ ನೀಡಲಾಗಿದೆ. 60 ವರ್ಷ ಮೇಲ್ಪಟ್ಟ ಯಾರಿಗೂ ದರ್ಬಾರ್ ಹಾಲ್ಗೆ ಎಂಟ್ರಿ ಇಲ್ಲ. ಅಲ್ಲದೆ ದರ್ಬಾರ್ ಹಾಲ್ಗೆ ಆಗಮಿಸುವ ಎಲ್ಲರಿಗೂ ಕೊರೋನಾ ಪರೀಕ್ಷೆ ಕಡ್ಡಾಯ. ಕಾರ್ಯಕ್ರಮದ ವೇಳೆ ಮೊಬೈಲ್ ಬಳಕೆ ನಿರ್ಬಂಧಿಸಿರೋ ರಾಜಮಾತೆ ಪ್ರಮೋದಾದೇವಿ ಒಡೆಯರ್, ಕೊರೊನಾ ಹಿನ್ನಲೆ ಈ ಬಾರಿ ಮಾಧ್ಯಮದವರಿಗೂ ನಿರ್ಬಂಧ ಹೇರಿದ್ದಾರೆ.