ದೆಹಲಿ: ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ ಅಥವಾ ‘ಎನ್ಸಿಸಿ’ಯನ್ನು ದೇಶದ ವಿಶ್ವವಿದ್ಯಾಲಯಗಳ ಪದವಿ ಮತ್ತು ಸ್ನಾತಕ ಪದವಿ ತರಗತಿಗಳಲ್ಲಿ ಐಚ್ಛಿಕ ವಿಷಯವನ್ನಾಗಿ ಸೇರಿಸಬೇಕು ಎಂದು ಎನ್ಸಿಸಿಯ ಮಹಾನಿರ್ದೇಶಕ ಯುಜಿಸಿಗೆ ಮನವಿ ಸಲ್ಲಿಸಿದ್ದಾರೆ. ಕಳೆದ ಮಾರ್ಚ್ 16ರಂದು ಯುಜಿಸಿಗೆ ಈ ಬಗ್ಗೆ ಮನವಿ ಸಲ್ಲಿಸಲಾಗಿದ್ದು ಯುಜಿಸಿ ಕಾರ್ಯದರ್ಶಿ ರಜ್ನೀಶ್ ಜೈನ್ ಈ ಕುರಿತು ಅಧಿಕೃತ ಪ್ರಕಟನೆಯನ್ನು ಹೊರಡಿಸಿದ್ದಾರೆ.
ಸದ್ಯ ಎನ್ಸಿಸಿಯನ್ನು ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಒಂದು ತರಬೇತಿಯನ್ನಾಗಿ ಕಲಿಸಲಾಗುತ್ತಿದೆ. ಐಚ್ಛಿಕ ವಿಷಯವನ್ನಾಗಿ ಬೋಧಿಸಲು ನೀಡಿರುವ ಮನವಿಯನ್ನು ಯುಜಿಸಿ ಪುರಸ್ಕರಿಸಿದರೆ ಎನ್ಸಿಸಿಗೆ ಇನ್ನಷ್ಟು ಹೆಚ್ಚಿನ ಸ್ಥಾನಮಾನ ದೊರೆಯಲಿದೆ.
ದೇಶದ ವಿವಿಧ ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಎನ್ಸಿಸಿಯನ್ನು ಒಂದು ತರಬೇತಿಯನ್ನಾಗಿ ಕಲಿಸಲಾಗುತ್ತದೆ. ನ್ಯಾಷನಲ್ ಕೆಡೆಟ್ ಕಾರ್ಪ್ಸ್ನ್ನು ಸೆಕೆಂಡ್ ಲೈನ್ ಆಫ್ ಡಿಫೆನ್ಸ್ ಎಂದೇ ಪರಿಗಣಿಸಲಾಗಿದೆ.
1947ರಲ್ಲಿ ಸ್ವಾತಂತ್ರ್ಯ ಪಡೆದ ನಂತರ ಆಗಿನ ಪ್ರಧಾನಿ ಜವಾಹರ್ ಲಾಲ್ ನೆಹರು ನಮ್ಮ ದೇಶದ ಯುವಜನಾಂಗದ ವ್ಯಕ್ತಿತ್ವವನ್ನು ರೂಪಿಸುವ, ಅವರನ್ನು ಉತ್ತಮ ಪ್ರಜೆಯನ್ನಾಗಿ ಮಾಡುವ ಒಂದು ಯುವ ಸಂಘಟನೆಯನ್ನು ರೂಪಿಸಲು ನಿರ್ಧರಿಸಿದರು. ಇದಕ್ಕೆ ಆಗಿನ ಶಿಕ್ಷಣ ತಜ್ಞರಾಗಿದ್ದ ಡಾ.ಹೆಚ್.ಎನ್. ಕುಂಜ್ರು ಅವರ ನೇತೃತ್ವದಲ್ಲಿ ಸಮಿತಿ ರಚಿಸಿದರು. ಆನಂತರ ಎನ್ಸಿಸಿ ರಚನೆಯಾಯಿತು.
ಎನ್ಸಿಸಿಯನ್ನು ದೇಶದ ಸೆಕೆಂಡ್ ಲೈನ್ ಆಫ್ ಡಿಫೆನ್ಸ್ ಎಂದೇ ಪರಿಗಣಿಸಲಾಗಿದೆ. ಎನ್ಸಿಸಿ ಸೇರಿದವರು ಹಲವು ಕ್ಯಾಂಪ್ಗಳನ್ನು ಅಟೆಂಡ್ ಮಾಡಬೇಕಾಗುತ್ತದೆ. ಸೇನೆಯ ಸಿಬ್ಬಂದಿಯ ಕಣ್ಗಾವಲಿನಲ್ಲಿ ನಡೆಯುವ ಈ ಕ್ಯಾಂಪ್ಗಳಲ್ಲಿ ಗಡಿ ಕಾಯುವ ಸೈನಿಕರಿಗೆ ನೀಡುವಂಥ ತರಬೇತಿಗಳನ್ನು ನೀಡುತ್ತಾರೆ. ನಮ್ಮ ದೈಹಿಕ ಸಾಮರ್ಥ್ಯ, ನಡಿಗೆ ಮತ್ತು ಮಾತಿನ ಶೈಲಿಯೂ ಸಾಕಷ್ಟು ಸುಧಾರಿಸುತ್ತದೆ.