ಕಡಬ: ರಾಮಕುಂಜ ಪೊಲೀಸ್ ಚೆಕ್ ಪೋಸ್ಟ್ ಬಳಿ ನಡೆದ ಅಪಘಾತದಲ್ಲಿ ದ್ವಿಚಕ್ರ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು ಇದಕ್ಕೆ ಪೊಲೀಸರೇ ನೇರ ಹೊಣೆ ಎಂಬ ನೆಪವೊಡ್ಡಿ ಚೆಕ್ ಪೋಸ್ಟ್, ಶೆಡ್ ಅನ್ನು ಧ್ವಂಸಗೊಳಿಸಿದ ಪ್ರಕರಣವನ್ನು ಕಡಬ ಪ್ರಖಂಡ ವಿ.ಹಿಂ.ಪ ಬಜರಂಗದಳ ಖಂಡಿಸಿದೆ.
ಕಡಬ ಪ್ರಖಂಡ ವಿ.ಹಿಂ.ಪ ಅಧ್ಯಕ್ಷ ರಾಧಾಕೃಷ್ಣ ಕೊಲ್ಪೆ ಹಾಗೂ ಕಾರ್ಯದರ್ಶಿ ಪ್ರಮೋದ್ ರೈ ಅವರು ಹೇಳಿಕೆ ನೀಡಿ, ಆತೂರು ಚೆಕ್ ಪೋಸ್ಟ್ ಬಳಿ ಪೊಲೀಸರಿಗೆ ದಾಖಲೆ ತೋರಿಸಿ ರಸ್ತೆ ದಾಟುತ್ತಿದ್ದ ವೇಳೆ ಎದುರಿನಿಂದ ಬಂದ ವಾಹನ ಡಿಕ್ಕಿಯಾಗಿ ಹ್ಯಾರೀಸ್ ಎಂಬಾತ ಮೃತಪಟ್ಟಿದ್ದರು. ಆದರೆ ಈ ದುರ್ಘಟನೆಯ ಬೆನ್ನಲ್ಲೆ ಕಿಡಿಗೇಡಿಗಳು ಪೊಲೀಸ್ ಚೆಕ್ ಪೋಸ್ಟ್, ಬ್ಯಾರಿಕೇಡ್ ಗಳನ್ನು ಧ್ವಂಸ ಮಾಡಿದ್ದಾರೆ.
ಆತೂರಿನಲ್ಲಿ ಅತೀ ಹೆಚ್ಚು ನಡೆಯುತ್ತಿರುವ ಕಾನೂನುಬಾಹಿರ ಚಟುವಟಿಕೆಗಳನ್ನು ಮಟ್ಟ ಹಾಕುವಲ್ಲಿ ಕಡಬ ಪೊಲೀಸರು ಯಶಸ್ವಿಯಾಗಿದ್ದು ಇದನ್ನು ಸಹಿಸದ ವ್ಯಕ್ತಿಗಳು ಈ ಕೃತ್ಯ ನಡೆಸಿದ್ದಾರೆ. ಅಲ್ಲಿ ನಡೆದ ನಿಜ ಘಟನೆಯನ್ನು ಅರಿಯದೆ ಪೊಲೀಸರ ಮೇಲೆಯೇ ಹಲ್ಲೆ ನಡೆಸಲು ಕಿಡಿಗೇಡಿಗಳು ಪ್ರಯತ್ನಿಸಿರುವುದು ಕೂಡ ಖಂಡನಿಯ, ಅಲ್ಲದೆ ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸರನ್ನು ಟಾರ್ಗೆಟ್ ಮಾಡಿದವರನ್ನು ಪತ್ತೆ ಹಚ್ಚಿ ಅವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.
ಅಂತೆಯೇ ಈ ಪ್ರಕರಣಕ್ಕೆ ಸಂಬಂಧಿಸಿ ಹತ್ತು ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.