ಉಳ್ಳಾಲ: ಆತ್ಮಹತ್ಯೆ ಪ್ರಕರಣಗಳನ್ನು ತಡೆಗಟ್ಟಲೆಂದೇ ಉಳ್ಳಾಲದ ನೇತ್ರಾವತಿ ಸೇತುವೆಗೆ ಕಬ್ಬಿಣದ ಸರಳಿನ ಬೇಲಿ ಹಾಕಲಾಗಿತ್ತು. ಆದರೆ, ಸಾಯೋರನ್ನು ತಡೆಯಲಾಗದು ಎನ್ನುವಂತೆ ಬೇಲಿ ಇರುವ ಸೇತುವೆ ಬಿಟ್ಟು ಪಕ್ಕದ ನೇತ್ರಾವತಿಯ ರೈಲ್ವೇ ಸೇತುವೆಯಿಂದ ನದಿಗೆ ಹಾರಿ ವೃದ್ಧೆ ಆತ್ಮಹತ್ಯೆಗೈದ ಶಂಕಿತ ಪ್ರಕರಣ ಬೆಳಕಿಗೆ ಬಂದಿದೆ.
ಕೋಟೆಕಾರಿನ ಮಾಡೂರು ನಿವಾಸಿ ಶಾರದಾ ಗಟ್ಟಿ (68) ಆತ್ಮಹತ್ಯೆಗೈದ ದುರ್ದೈವಿ. ಶಾರದಾ ಗಟ್ಟಿ ಅವರು ಮೂಲತಃ ಉಚ್ಚಿಲದ ಸಂಕೊಳಿಗೆ ನಿವಾಸಿಯಾಗಿದ್ದು, ಈ ಹಿಂದೆ ಸಂಕೊಳಿಗೆಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದರು. ಅವರ ಹೊಟೇಲ್ ಶಾರದಕ್ಕನ ಹೊಟೇಲ್ ಎಂದೇ ಪ್ರಸಿದ್ಧಿ ಪಡೆದಿತ್ತು. ಸದ್ಯ ಅವರು ಮಾಡೂರಿನಲ್ಲಿರುವ ಮಗಳ ಮನೆಯಲ್ಲಿ ನೆಲೆಸಿದ್ದರೆನ್ನಲಾಗಿದೆ.
ಕಳೆದ ಡಿ.15 ರಂದು ಉಚ್ಚಿಲ ಸಂಕೋಳಿಗೆಯ ತರವಾಡಿನ ಮನೆಗೆ ಸಂಕ್ರಾತಿ ಪೂಜೆಗೆ ತೆರಳಿದ್ದ ಶಾರದ ಅವರು ನಾಪತ್ತೆಯಾಗಿದ್ದರು. ಮನೆ ಮಂದಿ ಶಾರದ ಅವರು ಬೇರೆ ಮಕ್ಕಳ ಮನೆಗೆ ತೆರಳಿದ್ದಾರೆ ಎಂದು ಸುಮ್ಮನಿದ್ದರು. ಡಿ.20ರಂದು ಕೂಡ ಶಾರದ ಅವರು ಮನೆಗೆ ಹಿಂದಿರುಗದ ಹಿನ್ನಲೆಯಲ್ಲಿ ಉಳ್ಳಾಲ ಠಾಣೆಯಲ್ಲಿ ದೂರು ಕೊಟ್ಟಿದ್ದರು. ಇದೇ ವೇಳೆ, ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಅನಾಥ ವೃದ್ಧೆಯ ಶವ ಇರುವುದಾಗಿ ತಿಳಿಸಿದ್ದು ಮನೆಯವರು ತೆರಳಿ ವಿಚಾರಿಸಿದ್ದಾರೆ.
ಕಂಕನಾಡಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ನೇತ್ರಾವತಿ ನದಿ ತೀರದಲ್ಲಿ ಡಿ.16ರಂದು ಅಪರಿಚಿತ ವೃದ್ಧೆಯ ಶವ ಪತ್ತೆಯಾಗಿದ್ದು ಶವವನ್ನು ವೆನ್ಲಾಕ್ ಆಸ್ಪತ್ರೆಯಲ್ಲಿ ಇರಿಸಲಾಗಿತ್ತು. ಇದೀಗ ಆ ಶವವು ಶಾರದ ಗಟ್ಟಿಯವರದ್ದು ಎಂದು ತಿಳಿದು ಬಂದಿದೆ. ಖಿನ್ನತೆಯಿಂದ ಶಾರದ ಅವರು ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆಗೈದಿದ್ದಾರೆಂದು ಹೇಳಲಾಗುತ್ತಿದೆ. ಆದರೆ, ರಸ್ತೆಯ ಸೇತುವೆಯಲ್ಲಿ ಬೇಲಿ ಹಾಕಲಾಗಿದೆ. ಶವ ರೈಲ್ವೇ ಸೇತುವೆ ಬಳಿ ಪತ್ತೆಯಾಗಿದೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಹಾಗಾಗಿ ಸಾವಿನ ದಾರಿ ಅತ್ತ ತಿರುಗಿದೆಯೇ ಅನ್ನುವ ಅನುಮಾನ ಉಂಟಾಗಿದೆ.