ಮಂಗಳೂರು(ಅ.27): ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆ ಇದರ ನೂತನ ಯಕ್ಷಗಾನ ಮೇಳವನ್ನು ಶ್ರೀ ಕ್ಷೇತ್ರದಲ್ಲಿ ಲೋಕಾರ್ಪಣೆ ಮಾಡಲಾಯಿತು.
ದೇವಳದ ಚೌಕಿಯಲ್ಲಿ ಸುಬ್ರಹ್ಮಣ್ಯ ಸ್ವಾಮಿಗೆ ಪೂಜೆ ಸಲ್ಲಿಸಿದ ಬಳಿಕ ಕಲಾವಿದರು ಗೆಜ್ಜೆ ಕಟ್ಟಿದರು. ನಂತರ ನಡೆದ ಉದ್ಘಾಟನಾ ಸಮಾರಂಭದಲ್ಲಿ ಪಟ್ಲ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ್ ಭಂಡಾರಿ ಅವರು ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳನ್ನು ಸ್ವಾಗತಿಸಿದರು. ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಾಯಿತು. ಕ್ಷೇತ್ರದ ಧರ್ಮದರ್ಶಿ ಯಾಜಿ ನಿರಂಜನ್ ಭಟ್ ಅವರು ಮಾತಾನಾಡಿ “ಯಕ್ಷಗಾನ ಮೇಳದಿಂದ ತುಳುನಾಡಿನಲ್ಲಿ ಜ್ಞಾನದ ವೃದ್ಧಿಯಾಗಲಿದೆ.
ಯಾಗ ಭೂಮಿ ಎಂದೇ ಕರೆಯಲ್ಪಡುವ ಶ್ರೀ ಕ್ಷೇತ್ರದ ಮೂಲಕ ಯಕ್ಷ ಸೇವೆಯನ್ನು ಮಾಡಲು ಮುಂದಾಗಿರುವುದು ಮುಂದಿನ ದಿನಗಳಲ್ಲಿ ನಾಡಿನ ಉದ್ದಗಲಕ್ಕೂ ಯಕ್ಷಗಾನ ಮೇಳ ಸಂಚರಿಸುವ ಮೂಲಕ ಸಮಾಜ ಮತ್ತಷ್ಟು ಶಕ್ತಿಶಾಲಿಯಾಗಲಿ” ಎಂದು ಶುಭ ಹಾರೈಸಿದರು. ಕ್ಷೇತ್ರದ ಆಡಳಿತ ಮೊಕ್ತೇಸರ ಎಂ. ಶಶೀಂದ್ರ ಕುಮಾರ್, ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ್ ಭಂಡಾರಿ ಅಡ್ಯಾರ್, ಟ್ರಸ್ಟ್ ನ ಕೋಶಾಧಿಕಾರಿ ಸಿ.ಎ. ಸುದೇಶ್ ಕುಮಾರ್ ರೈ, ತುಳುಸಂಘ ಬರೋಡಾ ಅಧ್ಯಕ್ಷ, ಉದ್ಯಮಿ ಶಶಿಧರ್ ಶೆಟ್ಟಿ ಬರೋಡಾ, ಪಟ್ಲ ಮಹಾಬಲ ಶೆಟ್ಟಿ, ಟ್ರಸ್ಟ್ ನ ಉಪಾಧ್ಯಕ್ಷ ಡಾ. ಮನು ರಾವ್, ದುರ್ಗಾ ಪ್ರಸಾದ್ ಪಡುಬಿದ್ರಿ, ಪಟ್ಲ ಸತೀಶ್ ಶೆಟ್ಟಿ, ಸುಧಾಕರ್ ಆಚಾರ್ಯ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ’ಶಾಂಭವಿ ವಿಜಯ’ ಯಕ್ಷಗಾನ ಪ್ರಸಂಗವನ್ನು ಆಡಿ ತೋರಿಸಲಾಯಿತು. ನಿತೇಶ್ ಶೆಟ್ಟಿ ಎಕ್ಕಾರ್ ಕಾರ್ಯಕ್ರಮ ನಿರೂಪಿಸಿದರು. ಕಾಲಮಿತಿಯ ಯಕ್ಷಗಾನ ಪ್ರಸಂಗವನ್ನು ಆಡಿ ತೋರಿಸಲಿರುವ ಮೇಳ ನವೆಂಬರ್ 27ರಿಂದ ತುಳುನಾಡಿನ ಉದ್ದಗಲಕ್ಕೂ ತಿರುಗಾಟ ನಡೆಸಲಿದೆ.