ನವದೆಹಲಿ: ಭಾರತವು ಒಲಿಂಪಿಕ್ಸ್ನಲ್ಲಿ ಹಾಕಿ ಪಂದ್ಯದಲ್ಲಿ ಅದ್ಭುತ ಗೆಲುವನ್ನು ಸಂಭ್ರಮಿಸುತ್ತಿರುವ ಹೊತ್ತಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಪಕ್ಷಗಳು ರಾಜಕೀಯ ಲಾಭಕ್ಕಾಗಿ “ಸೆಲ್ಫ್-ಗೋಲುಗಳನ್ನು” ಹೊಡೆಯುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.
“ಒಂದು ಕಡೆ ನಮ್ಮ ದೇಶ, ನಮ್ಮ ಯುವಕರು ತುಂಬಾ ಸಾಧನೆ ಮಾಡುತ್ತಿದ್ದಾರೆ, ಗೆಲುವಿನ ಗೋಲ್ ಹೊಡೆಯುತ್ತಿದ್ದಾರೆ. ಆದರೂ ಕೆಲವು ಜನರು ತಮ್ಮ ರಾಜಕೀಯ ಉದ್ದೇಶಗಳಿಗಾಗಿ ಸೆಲ್ಫ್ ಗೋಲ್ ಹೊಡೆಯುತ್ತಿದ್ದಾರೆ. ದೇಶಕ್ಕೆ ಏನು ಬೇಕು, ದೇಶ ಏನು ಸಾಧನೆ ಮಾಡಿದೆ ಮತ್ತು ದೇಶ ಯಾವ ರೀತಿ ಬದಲಾಗುತ್ತಿದೆ ಎಂಬುದರ ಬಗ್ಗೆ ಅವರಿಗೆ ಬೇಕಾಗಿಲ್ಲ ಎಂದ ವರ್ಚುವಲ್ ಸಂವಾದದಲ್ಲಿ ಮೋದಿ ಹೇಳಿದ್ದಾರೆ.
ಸಂಸತ್ನಲ್ಲಿ ಪೆಗಾಸಸ್ ಬೇಹುಗಾರಿಕೆ ಆರೋಪ, ಇಂಧನ ಬೆಲೆ ಏರಿಕೆ, ರೈತರ ಪ್ರತಿಭಟನೆ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಚರ್ಚಿಸಬೇಕು ಎಂದು ಒತ್ತಾಯಿಸಿ ಪ್ರತಿಪಕ್ಷಗಳು ಪ್ರತಿಭಟನೆ ನಡೆಸಿ ಕಲಾಪಕ್ಕೆ ಪದೇ ಪದೇ ಅಡ್ಡಿಯುಂಟು ಮಾಡುತ್ತಿವೆ.
ಸಂಸತ್ ಕಾರ್ಯನಿರ್ವಹಿಸಲು ಅವಕಾಶ ನೀಡದೆ ಸಂವಿಧಾನ, ಪ್ರಜಾಪ್ರಭುತ್ವ ಮತ್ತು ಜನರನ್ನು ಅವಮಾನಿಸಲಾಗಿದೆ ಎಂದು ಈ ಹಿಂದೆ ಪ್ರಧಾನಿ ಮೋದಿ ಆರೋಪಿಸಿದ್ದರು. “ಎರಡೂ ಸದನಗಳಲ್ಲಿ ಪ್ರತಿಪಕ್ಷಗಳ ಕೃತ್ಯಗಳಿಂದ ಸಂಸತ್ನ್ನು ಅವಮಾನಿಸಲಾಗುತ್ತಿದೆ. ಕಾಗದವನ್ನು ಕಿತ್ತುಕೊಂಡು ಅದನ್ನು ಹರಿದು ಹಾಕಿದ ವ್ಯಕ್ತಿಯು ತನ್ನ ಕೃತ್ಯಗಳ ಬಗ್ಗೆ ಪಶ್ಚಾತ್ತಾಪ ಪಡುವುದಿಲ್ಲ” ಎಂದು ಬಿಜೆಪಿ ಸಂಸದರ ಸಭೆಯಲ್ಲಿ ಪ್ರಧಾನಿ ಮೋದಿ ಹೇಳಿದರು.
ಅವರು ಪೆಗಾಸಸ್ ಹಗರಣದ ಬಗ್ಗೆ ಹೇಳಿಕೆ ನೀಡಲು ಹೊರಟಿದ್ದಾಗ ತೃಣಮೂಲ ಸಂಸದ ಸಂತನು ಸೇನ್ ಅವರು ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರ ಕಾಗದಗಳನ್ನು ಕಸಿದುಕೊಂಡ ಘಟನೆಯನ್ನು ಅವರು ಹೇಳಿದ್ದಾರೆ. ಅದೇ ವೇಳೆ ಮಸೂದೆಗಳನ್ನು ಅಂಗೀಕರಿಸುತ್ತಿದ್ದಿರೋ, ಪಾಪ್ಡಿ ಚಾಟ್ ಮಾಡುತ್ತಿದ್ದರೋ ಎಂದು ಡೆರೆಕ್ ಒಬ್ರೇನ್ ಹೇಳಿಕೆಗೆ ಪ್ರತಿಕ್ರಿಯಿಸಿದ ಮೋದಿ, ಮಸೂದೆಗಳ ಅಂಗೀಕಾರಕ್ಕೆ ಸಂಬಂಧಿಸಿದಂತೆ ಹಿರಿಯ ಸಂಸದರ ಅವಹೇಳನಕಾರಿ ಹೇಳಿಕೆಗಳು ಇದು ಎಂದು ಖಂಡಿಸಿದ್ದಾರೆ.