53 ವರ್ಷದ ವ್ಯಕ್ತಿಯೊಬ್ಬ ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ ಘಟನೆ ಕೇರಳದ ಎರ್ನಾಕುಲಂನಲ್ಲಿ ನಡೆದಿದೆ. ಇರುಂಪನಂ ಫಾರ್ಮರ್ಸ್ ಕಾಲೋನಿ ನಿವಾಸಿ ಮನೋಹರನ್ (53) ಮೃತಪಟ್ಟ ವ್ಯಕ್ತಿ. ವಾಹನ ತಪಾಸಣೆ ವೇಳೆ ಬಂಧಿತನಿಗೆ ಪೊಲೀಸ್ ಅಧಿಕಾರಿ ಥಳಿಸಿದ್ದಾರೆ ಎಂಬ ಆರೋಪದಡಿ ತ್ರಿಪುಣಿತುರಾ ಹಿಲ್ ಪ್ಯಾಲೇಸ್ ಎಸ್ಐ ಜಿಮ್ಮಿ ಜೋಸ್ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಕೇರಳದ ಸುದ್ದಿ ಮಾಧ್ಯಮಗಳು ವರದಿ ಮಾಡಿದೆ.
ದ್ವಿಚಕ್ರ ವಾಹನವನ್ನು ತಪಾಸಣೆಗೊಳಿಸಲೆಂದು ಪೊಲೀಸರು ಸನ್ನೆ ಮಾಡಿ ನಿಲ್ಲಿಸಲು ಹೇಳಿದ್ದಾರೆ. ಆದರೆ ಅದನ್ನು ಪರಿಗಣಿಸದೆ ಮನೋಹರ್ ತೆರಳಿದ್ದರು. ನಿಲ್ಲಿಸದೆ ಕಾರಣ ಮನೋಹರನ್ ಅವರನ್ನು ಬಂಧಿಸಿ ಠಾಣೆಗೆ ಕರೆದೊಯ್ದಿದ್ದಾರೆ. ಠಾಣೆಯಿಂದ ವೈದ್ಯಕೀಯ ಪರೀಕ್ಷೆಗೆ ತೆರಳಲು ಮುಂದಾದಾಗ ಮನೋಹರನ್ ಕುಸಿದು ಬಿದ್ದಿದ್ದಾರೆ ಎನ್ನಲಾಗಿದೆ. ಮನೋಹರ್ ಅವರನ್ನು ಪೊಲೀಸ್ ಜೀಪಿನಲ್ಲಿ ತ್ರಿಪುಣಿತುರಾ ತಾಲೂಕು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ತಾಲೂಕು ಆಸ್ಪತ್ರೆಯಿಂದ ಆಂಬ್ಯುಲೆನ್ಸ್ನಲ್ಲಿ ಮನೋಹರನ್ನನ್ನು ಮೆಡಿಕಲ್ ಟ್ರಸ್ಟ್ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಆಗಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಥಳಿಸಿ ಅಮಾನುಷವಾಗಿ ವರ್ತಿಸಿದ್ದಾರೆ – ಸ್ಥಳೀಯರ ಆರೋಪ
ಇನ್ನು ಮನೋಹರನ್ಗೆ ಪೊಲೀಸರು ಥಳಿಸಿದ್ದಾರೆ ಪೊಲೀಸರು ಕೈ ತೋರಿಸಿದಾಗ ಮನೋಹರನ್ ಸ್ವಲ್ಪ ಮುಂದೆ ಹೋಗಿ ವಾಹನ ನಿಲ್ಲಿಸಿದರು. ಮನೋಹರನ್ ಹೆಲ್ಮೆಟ್ ಬದಲಾಯಿಸಿದ ತಕ್ಷಣ ಒಬ್ಬ ಪೋಲೀಸ್ ಬಂದು ಮನೋಹರನ್ಗೆ ಕಪಾಳಮೋಕ್ಷ ಮಾಡಿದ್ದಾನೆ. ನಂತರ ಠಾಣೆಗೆ ಕರೆದೊಯ್ದು ಬರ್ಬರವಾಗಿ ಥಳಿಸಿದ್ದಾರೆ ಎಂದು ಸಂಬಂಧಿಕರು ಹಾಗೂ ಸ್ಥಳೀಯರು ಆರೋಪಿಸಿದ್ದಾರೆ. ಅದೇ ವೇಳೆ ಮನೋಹರನ್ ನನ್ನು ಹೊಡೆದಿಲ್ಲ ಎಂಬುವುದಾಗಿ ಪೊಲೀಸರ ತಿಳಿಸಿದ್ದಾರೆ.
ಮನೋಹರನ್ ಸಾವಿನ ಸುದ್ದಿ ತಿಳಿದ ಸಂಬಂಧಿಕರು ನಿನ್ನೆ ಸಂಜೆ ತ್ರಿಪುಣಿತುರಾ ಹಿಲ್ಪ್ಲೇಸ್ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು. ವಿಸ್ತೃತ ತನಿಖೆ ನಡೆಸಲಾಗುವುದು ಎಂದು ಪೊಲೀಸರು ಭರವಸೆ ನೀಡಿದ ಮೇಲೆ ಪ್ರತಿಭಟನಾಕಾರರು ಸ್ಥಳದಿಂದ ತೆರಳಿದರು.
ಎಸ್ಐ ಅಮಾನತು: ತ್ರಿಪುಣಿತುರಾ ಹಿಲ್ ಪ್ಯಾಲೇಸ್ ಎಸ್ಐ ಜಿಮ್ಮಿ ಜೋಸ್ ಅವರನ್ನು ಅಮಾನತುಗೊಳಿಸಲಾಗಿದೆ. ಸಾವಿನ ಕುರಿತು ಜಿಲ್ಲಾ ಅಪರಾಧ ವಿಭಾಗ ತನಿಖೆ ನಡೆಸಲಿದೆ. ತ್ರಿಕ್ಕಕರ ಎಸಿಪಿ ತನಿಖೆಯ ಉಸ್ತುವಾರಿ ವಹಿಸಲಿದ್ದಾರೆ.