ಬೆಂಗಳೂರು(ಅ.20) : ಕೋವಿಡ್ 19 ಸಂದರ್ಭದಲ್ಲಿ ಮೃತಪಟ್ಟ ಕೊರೊನಾ ವಾರಿಯರ್ಸ್ ಗೆ ಕೇಂದ್ರ ಸರ್ಕಾರ 50 ಲಕ್ಷ ರೂ. ವಿಮಾ ಸೌಲಭ್ಯವನ್ನು ಮತ್ತೆ ಆರು ತಿಂಗಳುಗಳಿಗೆ ವಿಸ್ತರಿಸಲಾಗಿದೆ. ರಾಜ್ಯ ಸರ್ಕಾರವು ಕೋವಿಡ್ ನಿಂದ ಮೃತಪಟ್ಟ ಆರೋಗ್ಯ ಕಾರ್ಯಕರ್ತರಿಗೆ ಪ್ರಧಾನಮಂತ್ರಿ ಗರೀಬ್ ಪ್ಯಾಕೇಜ್ ವಿಮಾ ಯೋಜನೆಯಡಿ ಆಯಾ ಇಲಾಖೆಯಿಂದ ವಿಮಾ ಸೌಲಭ್ಯ ಒದಗಿಸಲು ಸೂಚನೆ ನೀಡಿದೆ.
ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯದ ಆದೇಶದಂತೆ ದಿನಾಂಕ 28-03-2020 ರಲ್ಲಿ ಕೋವಿಡ್ 19 ವಿರುದ್ಧ ಹೋರಾಡುತ್ತಿರುವ ಆರೋಗ್ಯ ಕಾರ್ಯಕರ್ತರಿಗೆ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಪ್ಯಾಕೇಜ್ ವಿಮಾ ಯೋಜನೆಯಡಿಯಲ್ಲಿ ವಿಮೆಯನ್ನು ಘೋಷಿಸಲಾಗಿದೆ. ಈ ಯೋಜನೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯ, ಭಾರತ ಸರ್ಕಾರ ದಿನಾಂಕ 21-09-2020 ರ ಪತ್ರದನ್ವಯ ದಿನಾಂಕ 25-09-2020 ರಿಂದ ಮತ್ತು 6 ತಿಂಗಳು ಕಾಲ ವಿಸ್ತರಿಸಲಾಗಿದೆಈ ಯೋಜನೆಯಡಿಯಲ್ಲಿ ಕೋವಿಡ್ 19 ರ ಕಾರ್ಯಕರ್ತರುಗಳಾದ ಖಾಸಗಿ ಆಸ್ಪತ್ರೆ ಸಿಬ್ಬಂದಿ, ನಿವೃತ್ತ/ಸ್ವಯಂ ಸೇವಕ/ಸ್ಥಳೀಯ ನಗರ ಸಂಸ್ಥೆಗಳು/ಒಪ್ಪಂದ ಹಾಗೂ ಹೊರಗುತ್ತಿಗೆ ಸಿಬ್ಬಂದಿಗಳು ಸಹ ಈ ಯೋಜನೆ ವ್ಯಾಪ್ತಿಗೆ ಒಳಪಟ್ಟಿರುತ್ತಾರೆ.
ಆರೋಗ್ಯ ಕಾರ್ಯಕರ್ತರು ಆಕಸ್ಮಿಕವಾಗಿ ಕೋವಿಡ್ 19 ಕ್ಕೆ ತುತ್ತಾಗಿ ಜೀವ ಹಾನಿಯಾಗಿದ್ದಲ್ಲಿ ಹಾಗೂ ಕರ್ತವ್ಯ ನಿರ್ವಹಿಸುವಾಗ ಅಪಘಾತಕ್ಕೀಡಾಗಿ ಮರಣ ಹೊಂದಿದಲ್ಲಿ ಅಂತಹವರಿಗೆ ಪ್ರಧಾನ ಮಂತ್ರಿ ಗರೀಬ್ ಪ್ಯಾಕೇಜ್ ವಿಮಾ ಯೋಜನೆಯಡಿಯಲ್ಲಿ 50.00 ಲಕ್ಷ ವಿಮಾ ಸೌಲಭ್ಯ ಒದಗಿಸಲು ಆದೇಶಿಸಲಾಗಿದೆ.