ವಿಟ್ಲ: ನಡೆದುಕೊಂಡು ಹೋಗುತ್ತಿದ್ದ ವೇಳೆ ತಡೆದು ನಿಲ್ಲಿಸಿ ಹಲ್ಲೆ ನಡೆಸಿ ಜೀವಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೋರ್ವರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬಂಟ್ವಾಳ ತಾಲೂಕು ಪುಣಚ ಗ್ರಾಮದ ಬೈಲಪದವು ನಿವಾಸಿ ನಾಗೇಶ್ ನಾಯಕ್ ರವರ ಪುತ್ರ ಮಂಜುನಾಥ ರವರು ದೂರುದಾರರಾಗಿದ್ದಾರೆ. ನನ್ನ ತಂದೆ ಹಾಗೂ ಅವರ ಅಣ್ಣ ಪ್ರಭಾಕರ ಪ್ರಭುರವರ ಮಧ್ಯೆ ಹಲವಾರು ವರುಷಗಳಿಂದ ಜಾಗದ ತಕರಾರು ನಡೆಯುತ್ತಿದೆ.
ಆ.೩೧ರಂದು ತಕರಾರು ಇರುವ ಜಾಗದಲ್ಲಿ ನನ್ನ ತಂದೆ ಹಾಗೂ ತಾಯಿ ಸೊಪ್ಪು ಕಡಿಯುತ್ತಿದ್ದು, ಅಲ್ಲಿಗೆ ನಾನು ನಡೆದುಕೊಂಡು ಹೋಗುತ್ತಿದ್ದ ವೇಳೆ ದಾರಿ ಮಧ್ಯೆ ನನ್ನನ್ನು ತಡೆದು ನಿಲ್ಲಿಸಿದ ಪ್ರಭಾಕರ ಪ್ರಭುರವರು ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂಧಿಸಿ, ಊರು ಬಿಟ್ಟು ಹೋಗದಿದ್ದರೆ ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಒಡ್ಡಿ ಹಲ್ಲೆ ನಡೆಸಿದ್ದಾರೆ ಎಂದು ಮಂಜುನಾಥರವರು ವಿಟ್ಲ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.