ಪುತ್ತೂರು: ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಗೆ ಹಳೆ ಮನೆಯೊಂದು ಕುಸಿದು ಬಿದ್ದ ಘಟನೆ ಪುತ್ತೂರು ಬಪ್ಪಳಿಗೆಯಲ್ಲಿ ನಡೆದಿದ್ದು, ಮಾಹಿತಿ ತಿಳಿದ ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ಪೌರಯುಕ್ತ ಮಧು ಮನೋಹರ್ ಭೇಟಿ ನೀಡಿ ತೆರವು ಕಾರ್ಯ ನಡೆಸಿದ್ದಾರೆ.
ನಿನ್ನೆ ಪುತ್ತೂರು ಸಮೀಪದ ಬಪ್ಪಳಿಗೆಯಲ್ಲಿ ಯಾರು ವಾಸವಿರದ ಹಳೆ ಮನೆಯೊಂದು ಕುಸಿದು ಬಿದ್ದಿದ್ದು, ಈ ಬಗ್ಗೆ ಮನೆ ಯಜಮಾನರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಇಂದು ಮುಂಜಾನೆ ಗೋಡೆ ಕುಸಿತ ಇನ್ನು ಹೆಚ್ಚಾಗಿದ್ದು ನೆರೆಯ ಮನೆಗೆ ಮತ್ತು ರಸ್ತೆಗೆ ಮಣ್ಣು ಬಿದ್ದಿದ್ದು, ಸಾರ್ವಜನಿಕರು ಆತಂಕದ ಸ್ಥಿತಿಯಲ್ಲಿದ್ದಾರೆ.
ಮನೆ ಯಜಮಾನ ಬಾರದ ಕಾರಣ ಸ್ಥಳೀಯರು ಪುತ್ತೂರು ಪೌರಾಯುಕ್ತರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ನೀಡಿದ ಹತ್ತು ನಿಮಿಷದಲ್ಲಿ ಪುತ್ತೂರು ನಗರ ಸಭಾ ಕಮಿಷನರ್ ಮಧು ಮನೋಹರ್ ಸಿಬ್ಬಂದಿಗಳೊಡನೆ ಘಟನಾ ಸ್ಥಳಕ್ಕೆ ಆಗಮಿಸಿ ರಸ್ತೆಗೆ ಬಿದ್ದ ಮಣ್ಣನ್ನು ತೆರವುಗೊಳಿಸಿದ್ದಾರೆ.
ಕರಾವಳಿಯಲ್ಲಿ ಧಾರಾಕಾರ ಮಳೆಯಿಂದಾಗಿ ಕೆಲವು ಪ್ರಾಕೃತಿಕ ವಿಕೋಪ ಘಟನೆಗಳು ನಡೆಯುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಪುತ್ತೂರು ಕಮಿಷನರ್ ಮಧು ಮನೋಹರ್ ರವರ ಕಾರ್ಯ ಪ್ರವೃತಿಗೆ ಸಾರ್ವಜನಿಕರು ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.