ಪುತ್ತೂರು: ಕಬಕದ ಮನೆಯೊಂದರಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿ ದೂರು ಕೊಟ್ಟ 24 ಗಂಟೆಯೊಳಗೆ ತನಿಖೆ ನಡೆಸಿದ ಪುತ್ತೂರು ನಗರ ಠಾಣಾ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳನ್ನು ಕಬಕ ವಿದ್ಯಾಪುರ ನಿವಾಸಿ ಸಂಸೇರ್(23ವ) ಮತ್ತು ಕೊಡಿಪ್ಪಾಡಿ ಗ್ರಾಮದ ಓಜಾಲ ನಿವಾಸಿ ಮಹಮ್ಮದ್ ಮುಬಾರಕ್(26ವ)ಎನ್ನಲಾಗಿದೆ. ಉರಿಮಜಲು ನಿವಾಸಿ ಕಾರ್ಯಾಡಿ ಕ್ವಾಟ್ರಸ್ನ ಮೊಹಮ್ಮದ್ ನೌಫಲ್ ಅವರ ಪತ್ನಿ ರಝೀನ ಅವರು ಜ.7ಕ್ಕೆ ಕಬಕದಲ್ಲಿರುವ ತನ್ನ ತಂದೆಯ ಮನೆಗೆ ಬಂದಿದ್ದ ಸಮಯ ತನ್ನ ಚಿನ್ನಾಭರಣವನ್ನು ಬೀರುವಿನಲ್ಲಿ ಇಟ್ಟಿದ್ದರು.
ಜ.10ರಂದು ಬೀರುವಿನಲ್ಲಿದ್ದ ಚಿನ್ನಾಭರಣ ಕಳವಾಗಿರುವುದು ಬೆಳಕಿಗೆ ಬಂದಿತ್ತು. ಈ ಹಿಂದೆಯೂ ಆಕೆಯ ಅಕ್ಕನ ಮಗಳ ಚಿನ್ನವೂ ಕಳವಾಗಿತ್ತು. ರಝೀನ ಅವರು ಜ.14ರಂದು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಪುತ್ತೂರು ನಗರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಗೋಪಾಲ್ ನಾಯ್ಕ್ ವರ ನಿರ್ದೇಶನದಂತೆ ತಕ್ಷಣ ತನಿಖೆ ಕೈಗೆತ್ತಿಕೊಂಡ ಪುತ್ತೂರು ನಗರ ಪೊಲೀಸ್ ಠಾಣೆಯ ಎಸ್.ಐ ಜಂಬೂರಾಜ್ ಮಹಾಜನ್ ಅವರು ರಾತ್ರಿಯೇ ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ.