ಹಾಸನ: ಕೆಲವು ದಿನಗಳ ಹಿಂದೆ ಭಗ್ನಗೊಂಡಿದ್ದ ಹಾಸನ ತಾಲೂಕಿನ ದೊಡ್ಡಗದ್ದವಳ್ಳಿ ಮಹಾಲಕ್ಷ್ಮಿ ದೇವಾಲಯದ ಮಹಾಕಾಳಿ ವಿಗ್ರಹವನ್ನು ಚೆನ್ನೈನ ಶಿಲ್ಪಕಲಾ ತಜ್ಞರು ಮರು ಜೋಡಣೆ ಮಾಡಿ ಕಾರ್ಯ ಪೂರ್ಣಗೊಳಿಸಿದ್ದಾರೆ.
ದೊಡ್ಡಗದ್ದವಳ್ಳಿಯಲ್ಲಿಯೇ ಉಳಿದುಕೊಂಡ ಶಿಲ್ಪಿಗಳು ಸದ್ಯ ದೇವಾಲಯಲ್ಲಿ ಸಿಸಿಟಿವಿ ಕ್ಯಾಮಾರಾ ಅಳವಡಿಕೆ ಮತ್ತು ಬಾಗಿಲು ರಿಪೇರಿ ನಡೆಸುತ್ತಿದ್ದಾರೆ. ಕೆಲಸ ಪೂರ್ಣಗೊಂಡು 14 ದಿನಗಳ ಬಳಿಕ ಮಹಾಕಾಳಿ ದರ್ಶನಕ್ಕೆ ಅವಕಾಶ ನೀಡಲಾಗುವುದು ಎಂದು ಪುರಾತತ್ವ ಇಲಾಖೆ ಹೇಳಿದೆ.
ಭಗ್ನಗೊಂಡ ಮಹಾಕಾಳಿ ವಿಗ್ರಹವನ್ನು ಪುರಾತತ್ವ ಇಲಾಖೆ ಮರುಜೋಡಣೆ ಮಾಡಿದೆ. ಆದರೆ ಹಿಂದೂ ಸಂಪ್ರದಾಯದಂತೆ ಭಿನ್ನವಾದ ವಿಗ್ರಹಕ್ಕೆ ಪೂಜೆಯನ್ನು ಸಲ್ಲಿಸುವಂತಿಲ್ಲ. ಭಕ್ತರು, ಗ್ರಾಮಸ್ಥರು ಮತ್ತು ಧಾರ್ಮಿಕ ಮುಖಂಡರು ಮುಂದೆ ಬಂದು ತದ್ರೂಪವಾದ ಒಂದು ಚಿಕ್ಕಮೂರ್ತಿಯನ್ನು ನಿರ್ಮಿಸಿ ಇಲಾಖೆಯ ಅನುಮತಿ ಮೇರೆಗೆ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠಾಪನೆ ಮಾಡಿ ಸಾನಿಧ್ಯವನ್ನು ವರ್ಗಾವಣೆ ಮಾಡಿ ನಿತ್ಯಪೂಜಾ ಕಾರ್ಯಗಳನ್ನು ನೆರವೇರಿಸಿಕೊಂಡು ಹೋಗಬಹುದು’ ಎಂದು ವಿಶ್ವಕರ್ಮ ಮಹಾಸಭಾದ ಮಾಜಿ ಜಿಲ್ಲಾ ಅಧ್ಯಕ್ಷ ಎಚ್.ವಿ. ಹರೀಶ್ ತಿಳಿಸಿದ್ದಾರೆ.