ಬೆಂಗಳೂರು: ವಿಧಾನ ಪರಿಷತ್ ನಲ್ಲಿ ಸಭಾಪತಿ ಪೀಠದಲ್ಲಿ ಕುಳಿತಿದ್ದ ಉಪ ಸಭಾಪತಿ ಧರ್ಮೇ ಗೌಡ ರವರನ್ನು ಎಳೆದಾಡಿದ ಘಟನೆ ಇಂದು ನಡೆದಿದೆ. ಸಭಾಪತಿ ಭವನದ ಮುಂದಿರುವ ಗ್ಲಾಸ್ ಕಿತ್ತೆಸೆದು ಸದಸ್ಯರು ದಾಂಧಲೆ ನಡೆಸಿದ್ದಾರೆ. ಸಭಾಪತಿ ಪೀಠದ ಬಳಿ ಕಾಂಗ್ರೆಸ್ ಸದಸ್ಯರು ದಾಂಧಲೆ ನಡೆಸಿದ್ದಾರೆ. ಸಭಾಪತಿ ಪೀಠಕ್ಕಾಗಿ ಪರಿಷತ್ ಮಾನ ಹರಾಜು ಮಾಡಿದ್ದಾರೆ.
ರಾಜ್ಯ ವಿಧಾನ ಪರಿಷತ್ನಲ್ಲಿ ಸಭಾಪತಿ ಸ್ಥಾನದ ಸೀಟ್ಗಾಗಿ ಶಾಸಕರ ನಡುವೆ ಜಂಗೀ ಕುಸ್ತಿ ನಡೆಯಿತು. ಬಿಜೆಪಿ ಮತ್ತು ಕಾಂಗ್ರೆಸ್ನ ವಿಧಾನ ಪರಿಷತ್ ಸದಸ್ಯರು ಕೈ ಕೈ ಮಿಲಾಯಿಸಿದ್ರು.ಗೋಹತ್ಯೆ ನಿಷೇಧ ತಿದ್ದುಪಡಿ ವಿಧೇಯಕ, ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಸೇರಿದಂತೆ ಕೆಲ ವಿಷಯಗಳ ಮಂಡನೆಗಾಗಿ ಇಂದು ವಿಧಾನ ಪರಿಷತ್ ವಿಶೇಷ ಅಧಿವೇಶನ ಕರೆಯಲಾಗಿತ್ತು.
ಆದ್ರೆ ಕಲಾಪ ಆರಂಭವಾಗುತ್ತಿದಂತೆ ಪರಿಷತ್ ಅಧ್ಯಕ್ಷರ ಸ್ಥಾನದಲ್ಲಿ ಉಪಸಭಾಪತಿ ಧರ್ಮೇಗೌಡ ಅವರು ಬಂದು ಕುಳಿತರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯರು ಅವರನ್ನು ಕುರ್ಚಿಯಿಂದ ಎಳೆದು ತಂದರು. ಕೂಡಲೇ ಮಧ್ಯ ಪ್ರವೇಶ ಮಾಡಿದ ಬಿಜೆಪಿ ಸದಸ್ಯರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಈ ನಡುವೆ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರು ಕೈಕೈ ಮೀಲಾಯಿಸಿದರು. ಈ ಗದ್ದಲದಲ್ಲಿ ಸಭಾಪತಿ ಪೀಠದ ಬಳಿ ಹಾಕಿದ್ದ ಗ್ಲಾಸ್ ಅನ್ನು ಸದಸ್ಯರು ಕಿತ್ತು ಎಸೆದರು.