ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಪುರಸಭೆ ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆ ವೇಳೆ ಬಿಜೆಪಿ ಶಾಸಕ ಸಿದ್ದು ಸವದಿ ಹಾಗೂ ಬೆಂಬಲಿಗರು ಪುರಸಭೆ ಸದಸ್ಯೆಯರ ಮೇಲೆ ತೋರಿದ ದೌರ್ಜನ್ಯ ಖಂಡಿಸಿ ಮಹಾಲಿಂಗಪುರ ಪಟ್ಟಣದಲ್ಲಿ ಕಾಂಗ್ರೆಸ್ ಮುಖಂಡರು ಬೃಹತ್ ಪ್ರತಿಭಟನೆ ನಡೆಸಿ ಬಿಜೆಪಿ ಶಾಸಕ ಸಿದ್ದು ಸವದಿ ರಾಜೀನಾಮೆಗೆ ಆಗ್ರಹಿಸಿದರು.
ಮಹಾಲಿಂಗಪುರ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನಾ ಸಭೆಯಲ್ಲಿ ಕೈ ಮುಖಂಡರು, ನಾಯಕಿಯರು ಬಿಜೆಪಿ ಶಾಸಕ ಸಿದ್ದು ಸವದಿ ಮಹಿಳಾ ಸದಸ್ಯೆಯರ ಮೇಲಿನ ದೌರ್ಜನ್ಯ ಖಂಡಿಸಿ, ಆಕ್ರೋಶ ವ್ಯಕ್ತಪಡಿಸಿದರು. ಕಳೆದು ತಿಂಗಳು ನವೆಂಬರ್ 9 ರಂದು ನಡೆದ ಮಹಾಲಿಂಗಪುರ ಪುರಸಭೆ ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆ ವೇಳೆ ನಡೆದ ತಳ್ಳಾಟ-ನೂಕಾಟದ ವೇಳೆ ಕಾಂಗ್ರೆಸ್ ಬೆಂಬಲಿಸಲು ಮುಂದಾಗಿದ್ದ ಬಿಜೆಪಿ ಪುರಸಭೆ ಸದಸ್ಯೆಯರಾದ ಚಾಂದಿನಿ ನಾಯ್ಕ, ಸವಿತಾ ಹುರಕಡ್ಲಿ ಗೋದಾವರಿ ಬಾಟ್ ಎಂಬುವರ ಮೇಲೆ ಅಮಾನವೀಯವಾಗಿ ನಡೆದುಕೊಂಡಿದ್ದ ವಿಡಿಯೋಗಳು ವೈರಲ್ ಆಗಿದ್ದವು.
ಬಿಜೆಪಿ ಶಾಸಕ ಸಿದ್ದು ಸವದಿ ಮೂರು ತಿಂಗಳ ಗರ್ಭಿಣಿ ಚಾಂದಿನಿ ನಾಯ್ಕ ಎಂಬುವರನ್ನು ನೂಕಿದ್ದರು. ಕಳೆದ ನವೆಂಬರ್ 25ರಂದು ಪುರಸಭೆ ಸದಸ್ಯೆ ಚಾಂದಿನಿ ನಾಯ್ಕ ಅವರಿಗೆ ಗರ್ಭಪಾತವಾಗಿರುವ ವಿಚಾರ ಮುನ್ನೆಲೆಗೆ ಬಂದ ಬೆನ್ನಲ್ಲೇ ಕಾಂಗ್ರೆಸ್ ಮುಖಂಡರು ಮಹಾಲಿಂಗಪುರ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆಗೆ ನಿರ್ಧರಿಸಿದ್ದರು.