ಕಲಬುರಗಿ: ಸಂಪೂರ್ಣವಾಗಿ ಲಾಕ್ಡೌನ್ ಜಾರಿಗೊಳಿಸುವ ಪ್ರಸ್ತಾಪ ಸದ್ಯಕ್ಕೆ ರಾಜ್ಯ ಸರ್ಕಾರದ ಮುಂದಿಲ್ಲ. ಆದರೆ ಜನ ಈಗಾಗಲೇ ಹೇರಲಾಗಿರುವ ನಿರ್ಬಂಧಗಳನ್ನು ಕಟ್ಟು ನಿಟ್ಟಾಗಿ ಪಾಲಿಸದೇ ಇದ್ದರೆ ಸಂಪೂರ್ಣ ಲಾಕ್ಡೌನ್ ಅಲ್ಲದೆ ಬೇರೆ ಆಯ್ಕೆ ಸರ್ಕಾರದ ಮುಂದಿಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಪರೋಕ್ಷವಾಗಿ ಸಂಪೂರ್ಣ ಲಾಕ್ಡೌನ್ ಬಗ್ಗೆ ಸುಳಿವು ಕೊಟ್ಟಿದ್ದಾರೆ.
ಕಲ್ಬುರ್ಗಿ ಅತಿಥಿಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನ ಪರಿಸ್ಥಿತಿಯ ಗಂಭೀರತೆಯನ್ನು ಅರ್ಥ ಮಾಡಿಕೊಳ್ಳಬೇಕು. ಅನಗತ್ಯವಾಗಿ ಓಡಾಡಬಾರದು. ಮನೆಯಲ್ಲೇ ಇದ್ದು ಸೋಂಕಿನಿ0ದ ರಕ್ಷಿಸಿಕೊಳ್ಳಬೇಕು ಎಂದರು.
ಏಕಾಏಕಿ ಸಂಪೂರ್ಣ ಲಾಕ್ಡೌನ್ ಜಾರಿ ಮಾಡುವುದಿಲ್ಲ. ಸೋಂಕು ನಿಯಂತ್ರಣಕ್ಕೆ ಸಮಯಾವಕಾಶ ಬೇಕಾಗುತ್ತದೆ. ಮಹಾರಾಷ್ಟ್ರದಲ್ಲಿ ಸತತವಾಗಿ 44 ದಿನಗಳ ಕಾಲ ಪ್ರಯತ್ನದ ಬಳಿಕ ನಿನ್ನೆ ಸೋಂಕಿನ ಪ್ರಮಾಣ 65 ಸಾವಿರದಿಂದ 45 ಸಾವಿರಕ್ಕೆ ಇಳಿದಿದೆ. ಇಲ್ಲಿಯೂ ಕಾಲಾವಕಾಶ ಬೇಕಾಗುತ್ತದೆ.
ಸರ್ಕಾರ ಜಾರಿಗೊಳಿಸಿರುವ ಬಿಗಿ ಕ್ರಮಗಳನ್ನು ಜನತೆ ಪಾಲಿಸಬೇಕು. ವಿಶ್ವದ ಬೇರೆ ಬೇರೆ ದೇಶಗಳಲ್ಲೂ ಇದೇ ರೀತಿಯ ಕ್ರಮಗಳಿಂದ ಸೋಂಕನ್ನು ನಿಯಂತ್ರಣ ಮಾಡಲಾಗಿದೆ. ರಾಜ್ಯದಲ್ಲೂ 14 ದಿನಗಳ ಕಫ್ರ್ಯೂ ಅವಧಿಯಲ್ಲಿ ಸೋಂಕು ಕಡಿಮೆಯಾಗುವ ನಿರೀಕ್ಷೆ ಇದೆ ಎಂದು ಹೇಳಿದರು.