


ಕಲಬುರಗಿ: ಕೆಕೆಆರ್ಟಿಸಿ ಬಸ್ನಲ್ಲಿ ಪ್ರಯಾಣಿಕರಿಗೆ ವಿದ್ಯಾರ್ಥಿ ಮೂಲಕ ಟಿಕೆಟ್ ವಿತರಿಸಿದ ಪ್ರಕರಣ ಸಂಬಂಧ, ಕರ್ತವ್ಯ ಲೋಪ ಎಸಗಿದ ಆರೋಪದ ಮೇರೆಗೆ ಕಂಡಕ್ಟರ್ನನ್ನ ಅಮಾನತುಗೊಳಿಸಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕಲಬುರಗಿ ವಿಭಾಗ-1ರ ವ್ಯಾಪ್ತಿಯ ಕಾಳಗಿ ಘಟಕದ ಚಾಲಕ-ಕಂ-ನಿರ್ವಾಹಕ ಸಿದ್ದಪ್ಪನನ್ನು ಅಮಾನತುಗೊಳಿಸಲಾಗಿದೆ.
ಪ್ರಕರಣ ಸಂಬಂಧ ತನಿಖೆ ನಡೆಸಿದ ಕಲಬುರಗಿ ವಿಭಾಗ-1ರ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ಜಿ ಗಂಗಾಧರ, ಕಳೆದ ಆಗಸ್ಟ್ 18 ರಂದು ಕಾಳಗಿ-ಕಲಬುರಗಿ-ಮಂಗಲಗಿ ಮಾರ್ಗದ KA-32 F-2066 ಬಸ್ನಲ್ಲಿ ಕರ್ತವ್ಯದ ಮೇಲಿದ್ದ ಚಾಲಕ-ಕಂ-ನಿರ್ವಾಹಕ ಸಿದ್ದಪ್ಪ (ಸಂಖ್ಯೆ: 7785) ಕಲಬುರಗಿ ಸೂಪರ್ ಮಾರ್ಕೆಟ್ ಬಸ್ ನಿಲ್ದಾಣದಲ್ಲಿ ವಾಹನ ನಿಲ್ಲಿಸಿದಾಗ, ತಮ್ಮ ಸುಪರ್ದಿಯಲ್ಲಿ ಇರಬೇಕಾಗಿದ್ದ ಇಟಿಎಂ ಯಂತ್ರವನ್ನು ಬಸ್ಸಿನಲ್ಲೇ ಬಿಟ್ಟು ತೆರಳಿದ್ದರು.
ಈ ವೇಳೆ ಬಸ್ಸಿನಲ್ಲಿದ್ದ ವಿದ್ಯಾರ್ಥಿ ಪ್ರಯಾಣಿಕನೊಬ್ಬ ಇಟಿಎಂ ಯಂತ್ರ ಬಳಸಿ ಇತರ ಪ್ರಯಾಣಿಕರಿಗೆ 11 ಟಿಕೆಟ್ಗಳನ್ನ ವಿತರಿಸಿದ್ದು, ಈ ದೃಶ್ಯವನ್ನು ಪ್ರಯಾಣಿಕರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಇದರಿಂದ ನಿಗಮದ ಘನತೆಗೆ ಧಕ್ಕೆ ಉಂಟಾದ ಹಿನ್ನೆಲೆಯಲ್ಲಿ, ನೌಕರರ ಶಿಸ್ತು ನಿಯಮಾವಳಿಗಳ ಪ್ರಕಾರ ಸಿದ್ದಪ್ಪ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.








