




ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಟಿವಿಕೆ ಮುಖ್ಯಸ್ಥ ವಿಜಯ್ ಅವರು ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೆಕರ್ ಅವರ ಭೇಟಿಗೆ ಸಮಯ ಕೇಳಿರುವುದಾಗಿ ವರದಿ ತಿಳಿಸಿದೆ. ಸರ್ಕಾರ ರಚಿಸುವ ನಿಟ್ಟಿನಲ್ಲಿ ಮಾತುಕತೆ ನಡೆಸಲು ಮಂಗಳವಾರ (ಮೇ 05) ಸಮಯ ನೀಡಬೇಕೆಂದು ರಾಜ್ಯಪಾಲರ ಕಚೇರಿಗೆ ಮನವಿ ಮಾಡಿಕೊಂಡಿರುವುದಾಗಿ ಮೂಲಗಳು ಹೇಳಿವೆ. ಚುನಾವಣೆಯಲ್ಲಿ ಟಿವಿಕೆ ಬರೋಬ್ಬರಿ 108 ಸ್ಥಾನಗಳಲ್ಲಿ ಜಯ ಗಳಿಸಿದೆ. ಆದರೆ ಬಹುಮತಕ್ಕೆ ಇನ್ನೂ 10 ಸ್ಥಾನಗಳ ಅಗತ್ಯವಿದೆ.
ಮಂಗಳವಾರ ವಿಜಯ್ ಅವರು ನೂತನವಾಗಿ ಆಯ್ಕೆಗೊಂಡ ಟಿವಿಕೆ ಶಾಸಕರ ಜತೆ ಸಭೆ ನಡೆಸಲಿದ್ದು, ಸರ್ಕಾರ ರಚನೆಗೆ ಸಂಬಂಧಿಸಿದಂತೆ ಮಾತುಕತೆ ನಡೆಸಲಿದ್ದಾರೆ ಎಂದು ವರದಿ ವಿವರಿಸಿದೆ. ತಮಿಳುನಾಡು ವಿಧಾನಸಭೆಯ 234 ಕ್ಷೇತ್ರಗಳಲ್ಲಿ ಟಿವಿಕೆ 108 ಸ್ಥಾನಗಳಲ್ಲಿ ಗೆಲುವು ಪಡೆದಿದೆ. ಎಂ.ಕೆ.ಸ್ಟಾಲಿನ್ ನೇತೃತ್ವದ ಡಿಎಂಕೆ 59 ಸ್ಥಾನ ಪಡೆದು ಎರಡನೇ ಸ್ಥಾನದಲ್ಲಿದೆ. ಎಐಎಡಿಎಂಕೆ 47 ಕ್ಷೇತ್ರಗಳಲ್ಲಿ ಜಯಗಳಿಸಿದೆ.
ಇನ್ನುಳಿದಂತೆ ಕಾಂಗ್ರೆಸ್ ಐದು ಕ್ಷೇತ್ರಗಳಲ್ಲಿ, ಪಾಟಾಳಿ ಮಕ್ಕಳ್ ಕಚ್ಚಿ ನಾಲ್ಕು ಸ್ಥಾನಗಳಲ್ಲಿ ಗೆಲುವು ಪಡೆದಿದೆ. ಈ ಪಕ್ಷಗಳ ಬೆಂಬಲದ ಹೊರತಾಗಿಯೂ ಟಿವಿಕೆಗೆ ಬಹುಮತದ ಕೊರತೆ ಎದುರಾಗಲಿದೆ. ಈ ನಿಟ್ಟಿನಲ್ಲಿ ಟಿವಿಕೆ ಸರ್ಕಾರ ರಚನೆಯ ಹಿನ್ನಲೆಯಲ್ಲಿ ಪ್ರಾದೇಶಿಕ ಪಕ್ಷಗಳ ಜತೆ ಹೊಂದಾಣಿಕೆ ಮಾಡಿಕೊಂಡು ಬಹುಮತ ಪಡೆಯುವ ಸಾಧ್ಯತೆ ಇದ್ದಿರುವುದಾಗಿ ವರದಿ ಮೂಲಗಳು ತಿಳಿಸಿವೆ.
ಈಗಾಗಲೇ ಟಿವಿಕೆ ನೇತೃತ್ವದ ಸರ್ಕಾರಕ್ಕೆ ಕಾಂಗ್ರೆಸ್ ಮತ್ತು ಪಿಎಂಕೆ ಬೆಂಬಲ ಘೋಷಿಸಿವೆ. ಅಲ್ಲದೇ ಉಭಯ ಪಕ್ಷಗಳಿಗೂ ಎರಡು ಸಚಿವ ಸ್ಥಾನ ಕೊಡುವ ಬಗ್ಗೆ ಮಾತುಕತೆ ನಡೆಯುತ್ತಿದೆ ಎನ್ನಲಾಗಿದೆ. ಮತ್ತೊಂದೆಡೆ 2 ಸ್ಥಾನ ಗೆದ್ದಿರುವ ಎಡಪಕ್ಷ ಇನ್ನಷ್ಟೇ ಅಂತಿಮ ನಿರ್ಧಾರವನ್ನು ಘೋಷಿಸಬೇಕಿದೆ. ತಮಿಳುನಾಡಿನ ಪ್ರಾದೇಶಿಕ ಪಕ್ಷಗಳಾದ ವಿಸಿಕೆ, ಡಿಎಂಡಿಕೆ ಕೂಡಾ ತಮ್ಮ ನಿರ್ಧಾರವನ್ನು ಇನ್ನಷ್ಟೇ ಪ್ರಕಟಿಸಬೇಕಾಗಿದೆ ಎಂದು ವರದಿ ತಿಳಿಸಿದೆ. ಮೈತ್ರಿಗೆ ಸಂಬಂಧಿಸಿದಂತೆ ಟಿವಿಕೆ ಮುಖ್ಯಸ್ಥ ವಿಜಯ್ ಅಂತಿಮ ನಿರ್ಧಾರವನ್ನು ಪ್ರಕಟಿಸಲಿದ್ದಾರೆ ಎಂದು ವರದಿ ವಿವರಿಸಿದೆ.








