1997ರಲ್ಲಿ 59 ಜನರ ದುರಂತ ಸಾವಿಗೆ ಕಾರಣವಾಗಿದ್ದ ದೆಹಲಿಯ ಉಪಹಾರ್ ಚಿತ್ರಮಂದಿರದಲ್ಲಿ ಮತ್ತೆ ಅಗ್ನಿ ಅವಘಡ ಸಂಭವಿಸಿದೆ. 1997 ರ ದುರಂತದ ನಂತರ ಮುಚ್ಚಿದ್ದ ಉಪಹಾರ್ ಸಿನಿಮಾ ಹಾಲ್ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಕೆಲವು ಆಸನಗಳು, ಪೀಠೋಪಕರಣಗಳು ಮತ್ತು ತ್ಯಾಜ್ಯಕ್ಕೆ ಬೆಂಕಿ ಅಂಟಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಥಿಯೇಟರ್ನ ಬಾಲ್ಕನಿ ಮತ್ತು ಮಹಡಿ ಬೆಂಕಿಯಿಂದ ಹಾನಿಗೊಳಗಾಗಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದ್ದು, ವಿಚಾರ ತಿಳಿಯುತ್ತಲೇ ಒಟ್ಟು ಒಂಬತ್ತು ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ದೆಹಲಿ ಅಗ್ನಿಶಾಮಕ ಸೇವಾ ನಿರ್ದೇಶಕ ಅತುಲ್ ಗಾರ್ಗ್ ತಿಳಿಸಿದ್ದಾರೆ.
ಬೆಳಗಿನ ಜಾವ 4:46ಕ್ಕೆ ಬೆಂಕಿ ಕಾಣಿಸಿಕೊಂಡಿದ್ದು, 7:20ರ ಸುಮಾರಿಗೆ ಬೆಂಕಿಯನ್ನು ಹತೋಟಿಗೆ ತರಲಾಯಿತು. ಘಟನೆಯಲ್ಲಿ ಯಾರಿಗೂ ಯಾವುದೇ ಗಾಯಗಳಾಗಿಲ್ಲ. ಬೆಂಕಿಗೆ ಕಾರಣ ಇನ್ನೂ ಸ್ಪಷ್ಟವಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ದೆಹಲಿಯ ಗ್ರೀನ್ ಪಾರ್ಕ್ ಪ್ರದೇಶದಲ್ಲಿರುವ ಉಪಹಾರ್ ಚಿತ್ರಮಂದಿರದಲ್ಲಿ ಜೂನ್ 13, 1997 ರಂದು ಭಾರಿ ಬೆಂಕಿಯ ದುರಂತಕ್ಕೀಡಾಗಿತ್ತು. ಅಂದು ಚಿತ್ರ ಪ್ರದರ್ಶನ ನಡೆಯುತ್ತಿದ್ದಾಗಲೇ ಅಗ್ನಿ ಅವಘಡ ಸಂಭವಿಸಿ ಅಲ್ಲಿದ್ದ ಪ್ರೇಕ್ಷಕರ ಪೈಕಿ 59 ಜನರು ಸಾವನ್ನಪ್ಪಿದರು ಮತ್ತು 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಈ ಪ್ರಕರಣದಲ್ಲಿ ಚಿತ್ರಮಂದಿರ ಮಾಲೀಕರು ಮತ್ತು ರಿಯಲ್ ಎಸ್ಟೇಟ್ ಉದ್ಯಮಿಗಳಾದ ಥಿಯೇಟರ್ ಮಾಲೀಕರಾದ ಗೋಪಾಲ್ ಅನ್ಸಾಲ್ ಮತ್ತು ಸುಶೀಲ್ ಅನ್ಸಾಲ್ ಅವರು ನಿರ್ಲಕ್ಷ್ಯದಿಂದ ಸಾವಿಗೆ ಕಾರಣರಾಗಿದ್ದಾರೆ. ಈ ಸಂಬಂಧ ಇಬ್ಬರೂ ಸಹೋದರರಿಗೆ ಶಿಕ್ಷೆಯಾಗಿದ್ದು, ಈ ಪ್ರಕರಣ ಇನ್ನೂ ಸುಪ್ರೀಂ ಕೋರ್ಟ್ ವಿಚಾರಣೆಯಲ್ಲಿದೆ.