ಮುಡಿಪು: ಸದಾ ಒಂದಲ್ಲೊಂದು ಚಟುವಟಿಕೆಗಳ ಮೂಲಕ ಗಮನ ಸೆಳೆಯುವ ಶಾಸಕ ಯು ಟಿ ಖಾದರ್ ಲುಂಗಿ, ಮುಟ್ಟಾಳೆ ಧರಿಸಿ ಗದ್ದೆಗೆ ಇಳಿದಿದ್ದಾರೆ. ಕೃಷಿ ಕಾರ್ಮಿಕರ ಜೊತೆಗೆ ಸಾಂಪ್ರದಾಯಿಕ ಶೈಲಿಯಲ್ಲಿ ನೇಜಿಯೂ ನೆಟ್ಟಿದ್ದಾರೆ. ಕೃಷಿ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಂಡು ಹಡಿಲು ಗದ್ದೆಯ ಕೃಷಿ ನಾಟಿ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.
ಕೋವಿಡ್ ಲಾಕ್ಡೌನ್ ಸಮಯವನ್ನು ಸದ್ಬಳಕೆ ಮಾಡಿಕೊಂಡಿರುವ ಸ್ವ ಸಹಾಯ ಸಂಘದ ಸದಸ್ಯರು ಕೊಣಾಜೆಯಲ್ಲಿ ಹಡಿಲು ಗದ್ದೆಯಲ್ಲಿ ಕೃಷಿ ಕಾಯಕದಲ್ಲಿ ತೊಡಗಿಸಿಕೊಳ್ಳುವ ಮೂಲಕ ಮಾದರಿಯಾಗಿದ್ದಾರೆ. ಸ್ವ ಸಹಾಯ ಸಂಘ ಸದಸ್ಯರ ಕೃಷಿ ನಾಟಿ ಕಾರ್ಯಕ್ಕೆ ಶಾಸಕ ಯು.ಟಿ.ಖಾದರ್ ಚಾಲನೆ ನೀಡಿದರು. ಖಾದರ್ ‘ಕೋವಿಡ್ ಸಂಕಷ್ಟ ಕಾಲದಲ್ಲಿ ನಾವು ನಕಾರಾತ್ಮಕ ಚಿಂತನೆ ಮಾಡದೆ ಇಂತಹ ಮಾದರಿ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು. ಹೆಚ್ಚು ಜನರು ಇಂತಹ ಕಾರ್ಯಕ್ಕೆ ಸೇರಬೇಕು’ ಎಂದರು.
ಕೊಣಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂಚಲಾಕ್ಷಿ, ಸದಸ್ಯ ಇಕ್ಬಾಲ್, ರವಿಕುಮಾರ್, ವೇದಾವತಿ ಗಟ್ಟಿ, ನಝರ್ ಷಾ, ಸಂತೋಷ್ ಕುಮಾರ್ ಶೆಟ್ಟಿ, ಪಂಚಾಯಿತಿ ಸಿಬ್ಬಂದಿ ಸವಿತಾ, ಶಾಲಿನಿ, ಶ್ಯಾಲೆಟ್ ಡಿಸೋಜ, ಸ್ಥಳೀಯರಾದ ಮುತ್ತು ಶೆಟ್ಟಿ, ಇಕ್ಬಾಲ್ ಸಾಮಣಿಗೆ, ಅಮೀರ್ ಹುಸೈನ್ ಕೋಡಿಜಾಲ್, ಮಹಾಬಲ ಗಟ್ಟಿ, ಸೀತಾರಾಮ ಗಟ್ಟಿಣ ದಯಾನಂದ ಗಟ್ಟಿ, ಯಾದವ ಬೆಳ್ಚಾಡ ಇದ್ದರು. ಕೊಣಾಜೆ ಕೆಳಗಿನ ಮನೆ ಬಳಿಯ ನಾಗಬ್ರಹ್ಮ ಪ್ರಗತಿಪರ ಸ್ವಹಾಯ ಸಂಘದ ಈ ಕೃಷಿ ಕಾರ್ಯಕ್ಕೆ ಪರಿಸರದ ಇತರ ಸ್ವಸಹಾಯ ಸಂಘಗಳ ಸದಸ್ಯರೂ ಕೈ ಜೋಡಿಸಿದರು.