ಉತ್ತರಾಖಂಡ್: ಉತ್ತರಾಖಂಡ್ನ ಬಿಜೆಪಿ ನಾಯಕ ತಿರತ್ ಸಿಂಗ್ ರಾವತ್ ಇತ್ತೀಚೆಗಷ್ಟೇ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಇದೀಗ ವಿವಾದಾತ್ಮಕ ಹೇಳಿಕೆಯೊಂದನ್ನ ನೀಡುವ ಮೂಲಕ ತಿರತ್ ಸಿಂಗ್ ರಾವತ್ ಸದ್ದು ಮಾಡಿದ್ದಾರೆ.
ಮಕ್ಕಳ ಹಕ್ಕು ರಕ್ಷಣೆ ಆಯೋಗದ ವರ್ಕ್ಶಾಪ್ನಲ್ಲಿ ಪಾಲ್ಗೊಂಡು ಮಾತನಾಡಿರುವ ಅವರು.. ಎನ್ಜಿಓದಲ್ಲಿ ಮಹಿಳೆಯರು ಹರಿದ ಜೀನ್ಸ್ಗಳನ್ನ ತೊಟ್ಟು ಓಡುವುದನ್ನ ಕಂಡು ಶಾಕ್ ಆಗಿದೆ. ಅವರು ಸಮಾಜಕ್ಕೆ ಎಂಥ ಉದಾಹರಣೆ ನಿರ್ಮಿಸಲು ಹೊರಟಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಸಮಾಜದಲ್ಲಿ ಹರಿದ ಜೀನ್ಸ್ಗಳನ್ನ ತೊಟ್ಟ ಇಂಥ ಮಹಿಳೆಯರು ಜನರ ಸಮಸ್ಯೆಗಳನ್ನ ಪರಿಹರಿಸಲು ಹೊರಡುತ್ತಾರೆ. ನಾವು ಸಮಾಜಕ್ಕೆ, ನಮ್ಮ ಮಕ್ಕಳಿಗೆ ಎಂಥ ಸಂದೇಶವನ್ನು ಕೊಡಲು ಮುಂದಾಗಿದ್ದೇವೆ..? ಇದೆಲ್ಲವೂ ಮನೆಯಿಂದಲೇ ಪ್ರಾರಂಭವಾಗುತ್ತದೆ. ನಾವು ಮಾಡುವುದನ್ನೇ ನಮ್ಮ ಮಕ್ಕಳು ಅನುಸರಿಸುತ್ತಾರೆ. ಮನೆಯಲ್ಲಿ ಉತ್ತಮ ಸಂಸ್ಕಾರ ಕಲಿತ ಮಗು ಎಷ್ಟೇ ಆಧುನಿಕನಾದರೂ ಸೋಲುವುದಿಲ್ಲ.
ವಿದೇಶೀಯರು ಯೋಗ ಕಲಿತು ತಮ್ಮ ದೇಹವನ್ನು ಮುಚ್ಚಿಕೊಳ್ಳಲು ಮುಂದಾಗಿರುವ ಈ ಸಮಯದಲ್ಲಿ ನಾವು ನಗ್ನರಾಗುವತ್ತ ಹೊರಟಿದ್ದೇವೆ. ಬೆತ್ತಲೆ ಮಂಡಿಗಳನ್ನ ಪ್ರದರ್ಶಿಸುವುದು. ಹರಿದ ಜೀನ್ಸ್ ಧರಿಸುವುದು ಮತ್ತು ಶ್ರೀಮಂತ ಮಕ್ಕಳಂತೆ ಕಾಣಿಸಿಕೊಳ್ಳುವುದು.. ಇಂಥದ್ದನ್ನೇ ಈಗ ಕಲಿಸಲಾಗ್ತಿದೆ.
ಇದು ಮನೆಯಿಂದ ಬರುತ್ತಿಲ್ಲ ಅನ್ನೋದಾದ್ರೆ ಬೇರೆಲ್ಲಿಂದ ಬರುತ್ತೆ..? ಇದರಲ್ಲಿ ಶಿಕ್ಷಕರ, ಶಾಲೆಗಳ ತಪ್ಪು ಎಲ್ಲಿದೆ..? ಹರಿದ ಜೀನ್ಸ್ನಲ್ಲಿ ಮಂಡಿ ತೋರಿಸುತ್ತಾ ನಾನು ನನ್ನ ಮಗನನ್ನ ಎಲ್ಲಿಗೆ ಕರೆದೊಯ್ಯುತ್ತಿದ್ದೇನೆ..? ಹುಡುಗಿಯರೇನೂ ಕಡಿಮೆ ಇಲ್ಲ. ಅವರೂ ಮಂಡಿ ತೋರಿಸುತ್ತಾರೆ. ಇದು ಸರಿ ಇದೆಯಾ..? ಎಂದು ತಿರತ್ ಸಿಂಗ್ ರಾವತ್ ಪ್ರಶ್ನಿಸಿದ್ದಾರೆ.