ಬೆಳ್ತಂಗಡಿ(ನ.3): ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೊಕ್ರಾಡಿಯ ಅತ್ರಿಜಾಲು ಸಮೀಪದ ಮನೆಯೊಂದರಲ್ಲಿ ವಾಸ್ತವ್ಯವಿದ್ದ ಕೃಷಿಕ ದಂಪತಿ ತಮ್ಮ ಮಗುವಿನೊಂದಿಗೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವನ್ಮರಣ ಹೋರಾಟ ನಡೆಸುತ್ತಿದ್ದ ತಂದೆ ಮತ್ತು ಮಗು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಕೊಕ್ರಾಡಿ ಗ್ರಾಮದ ಅತ್ರಿಜಾಲು ನಿವಾಸಿ ಚಂದ್ರಶೇಖರ ಶೆಟ್ಟಿಗಾರ್(37.ವ) ಅವರ ಪತ್ನಿ ಆಶಾ(30.ವ) ಹಾಗೂ 5 ವರ್ಷ ಪ್ರಾಯದ ಮಗು ನಿನ್ನೆ ಸಂಜೆಯ ವೇಳೆ ತಮ್ಮ ಮನೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದು, ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಮೂವರನ್ನು ಕಾರ್ಕಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು.
ಆದರೆ ಇಂದು ಚಿಕಿತ್ಸೆಗೆ ಸರಿಯಾಗಿ ಸ್ಪಂದಿಸದೆ ಚಂದ್ರಶೇಖರ ಶೆಟ್ಟಿಗಾರ್ ಮತ್ತು 5 ವರ್ಷ ಪ್ರಾಯದ ಮಗು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಮೃತ ಚಂದ್ರಶೇಖರ ಶೆಟ್ಟಿಗಾರ್ ಪ್ರಗತಿಪರ ಕೃಷಿಕರಾಗಿದ್ದು, ಆರ್ಥಿಕವಾಗಿ ಸಧೃಢರಾಗಿದ್ದರು. ಯಾವುದೋ ಕೌಟುಂಬಿಕ ಕಲಹದಿಂದ ಈ ಕೃತ್ಯವೆಸಗಿರಬಹುದು ಎಂದು ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.