

ಬಂಟ್ವಾಳ: ಕೃಷಿ ಬಳಕೆಯ ಯೂರಿಯಾ ರಸಗೊಬ್ಬರವನ್ನು ಕಾನೂನುಬಾಹಿರವಾಗಿ ತಾಂತ್ರಿಕ (Technical Grade) ಬಳಕೆಯ ಚೀಲಗಳಿಗೆ ಮರುಪೊಟ್ಟಣಿಕೆ ಮಾಡಿ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ವಿಟ್ಲ ಪೊಲೀಸರು ಕಾರ್ಯಾಚರಣೆ ನಡೆಸಿ 632 ಚೀಲಗಳನ್ನು ಪತ್ತೆಹಚ್ಚಿದ್ದಾರೆ.ಜೂನ್ 11ರಂದು ಸಂಜೆ ದೊರೆತ ಖಚಿತ ಮಾಹಿತಿಯ ಮೇರೆಗೆ ವಿಟ್ಲ ಠಾಣೆಯ ಪೊಲೀಸ್ ನಿರೀಕ್ಷಕ ಪ್ರಕಾಶ್ ದೇವಾಡಿಗ ಹಾಗೂ ಸಿಬ್ಬಂದಿ ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದ ಬೊಳಂತೂರಿನಲ್ಲಿರುವ ಸ್ಥಳಕ್ಕೆ ದಾಳಿ ನಡೆಸಿದರು. ಈ ವೇಳೆ ಮೊಹಮ್ಮದ್ ಅಶ್ರಫ್ ಎಂಬಾತನು ತನ್ನ ಮನೆಯ ಸಮೀಪ ಕೃಷಿ ಗ್ರೇಡ್ ಯೂರಿಯಾ ರಸಗೊಬ್ಬರವನ್ನು ಕೈಗಾರಿಕಾ ಬಳಕೆಗೆ ಉದ್ದೇಶಿತ ತಾಂತ್ರಿಕ ಗ್ರೇಡ್ ಚೀಲಗಳಿಗೆ ಮರುಪೊಟ್ಟಣಿಕೆ ಮಾಡಿ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ.ಪರಿಶೀಲನೆಯ ವೇಳೆ ಒಟ್ಟು 632 ಚೀಲಗಳ ಯೂರಿಯಾ ರಸಗೊಬ್ಬರವನ್ನು ಮರುಪೊಟ್ಟಣಿಕೆ ಮಾಡಿರುವುದು ಪತ್ತೆಯಾಗಿದೆ.

ಬಳಿಕ ಬಂಟ್ವಾಳ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯ ಕೃಷಿ ಅಧಿಕಾರಿ ನಂದನ ಶೆಣೈ ಪಿ. (ತಾಂತ್ರಿಕ) ಅವರಿಗೆ ಮಾಹಿತಿ ನೀಡಲಾಗಿದ್ದು, ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


ಕೃಷಿ ಅಧಿಕಾರಿಯವರು ನೀಡಿದ ದೂರಿನ ಆಧಾರದಲ್ಲಿ ವಿಟ್ಲ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 127/2026 ದಾಖಲಿಸಲಾಗಿದ್ದು, ಅಗತ್ಯ ವಸ್ತುಗಳ ಕಾಯ್ದೆ (Essential Commodities Act, 1955)ಯ ಕಲಂ 3(2)(a), 3(2)(c), 3(2)(d) ಹಾಗೂ 3(2)(f) ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.








