ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನಲೆ ಸೋಂಕು ನಿಯಂತ್ರಣ ಮಾಡಲು ವಿಟ್ಲ ಪಟ್ಟಣ ಪಂಚಾಯತ್ ಹೊಸ ಆದೇಶವನ್ನು ಜಾರಿಗೊಳಿಸಲಿದೆ. ವಿಟ್ಲದಲ್ಲಿ ಶನಿವಾರ ಹಾಗೂ ಭಾನುವಾರ ಸಂಪೂರ್ಣ ಲಾಕ್ಡೌನ್ ಮಾಡಲು ನಿರ್ಧರಿಸಲಾಗಿದೆ.
ಕೋವಿಡ್ ಟಾಸ್ಕ್ ಫೋರ್ಸ್ ತುರ್ತು ಸಭೆಯಲ್ಲಿ ಈ ನಿರ್ಧಾರವನ್ನು ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷೆ ಚಂದ್ರಕಾಂತಿ ಶೆಟ್ಟಿ ಅವರ ನೇತೃತ್ವದಲ್ಲಿ ಕೈಗೊಳ್ಳಲಾಯಿತು.
ನಾಳೆಯಿಂದ ವಿಟ್ಲಕ್ಕೆ ಸಂಪರ್ಕ ಕಲ್ಪಿಸುವ ನಾಲ್ಕು ಕಡೆಗಳ ರಸ್ತೆಗಳಲ್ಲಿ ಪೊಲೀಸರು ಹಾಗೂ ಆರೋಗ್ಯಾಧಿಕಾರಿಗಳು ಇರಲಿದ್ದು ಕೋವಿಡ್ ನೆಗೆಟಿವ್ ರಿಪೋರ್ಟ್ ತೋರಿಸಬೇಕು. ಎಂದಿನ0ತೆ ಬೊಬ್ಬೆಕೇರಿ, ಮೇಗಿನಪೇಟೆ, ಬಾಕಿಮಾರು, ನಾಡಕಛೇರಿ ಬಳಿ ಚೆಕ್ಪೋಸ್ಟ್ ಕಾರ್ಯ ನಿರ್ವಹಿಸಲಿದೆ. ಇಲ್ಲದಿದ್ದಲ್ಲಿ ಸ್ಥಳದಲ್ಲೇ ಕೋವಿಡ್ ಟೆಸ್ಟ್ ಮಾಡಿಸಿ ಕಳುಹಿಸಲು ಕ್ರಮ ಕೈಗೊಂಡಿದ್ದಾರೆ. ವಾರಾಂತ್ಯದಲ್ಲಿ ಮೆಡಿಕಲ್ ತೆರೆಯಲು ಅವಕಾಶವಿದೆ. ಹಾಲಿನ ನೆಪದಲ್ಲಿ ಬೇಕರಿ ತೆರೆಯುವಂತಿಲ್ಲ. ಹಾಲಿನ ಅಂಗಡಿ ಬೆಳಿಗೆ 9 ಗಂಟೆಯ ವರೆಗೆ ಮಾತ್ರ ಅವಕಾಶವಿರುತ್ತದೆ.
ವಿಟ್ಲದ ಸುರುಳಿಮೂಲೆ ಕಾಲೋನಿಯಲ್ಲಿ ಒಂದೇ ಮನೆಯಲ್ಲಿ ೯ ಮಂದಿಗೆ ಕೋವಿಡ್ ದೃಢಪಟ್ಟ ಹಿನ್ನಲೆ ಸೀಲ್ಡೌನ್ ಮಾಡಲು ನಿರ್ಧರಿಸಿದ್ದಾರೆ. ಸೋಂಕಿತರು ಕೋವಿಡ್ ಕೇರ್ ಸೆಂಟರ್ಗೆ ಆಗಮಿಸದೇ ಇದ್ದಲ್ಲಿ ಕಾಲೋನಿಯನ್ನು ಸೀಲ್ ಡೌನ್ ಮಾಡಲು ನಿರ್ಧರಿಸಿದ್ದಾರೆ.
ಈ ವೇಳೆ ಪಟ್ಟಣ ಪಂಚಾಯತ್ ಉಪಾಧ್ಯಕ್ಷೆ ಉಷಾ ಕೃಷ್ಣಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ ಕಲ್ಲಕಟ್ಟ, ಸದಸ್ಯ ಅರುಣ್ ಎಂ ವಿಟ್ಲ, ಹಿರಿಯ ಸದಸ್ಯ ಅಶೋಕ್ ಕುಮಾರ್ ಶೆಟ್ಟಿ, ರಾಮ್ದಾಸ್ ಶೆಣೈ, ಜಯಂತ ನಾಯ್ಕ, ಹಸೈನಾರ್ ನೆಲ್ಲಿಗುಡ್ಡೆ, ಲೋಕನಾಥ ಶೆಟ್ಟಿ, ದಮಯಂತಿ, ಲತಾ ಅಶೋಕ್, ಅಬುಬಕ್ಕರ್, ಸುನೀತಾ ಕೋಟ್ಯಾನ್, ಮುಖ್ಯಾಧಿಕಾರಿ ಮಾಲಿನಿ, ವಿಟ್ಲ ಪೊಲೀಸ್ ಠಾಣೆಯ ಎಎಸ್ಐ ಕರುಣಾಕರ್, ಆರೋಗ್ಯ ಇಲಾಖೆಯ ಕುಸುಮಾ, ಗ್ರಾಮ ಕರಣಿಕ ಪ್ರಕಾಶ್, ಸಿಬ್ಬಂದಿ ಚಂದ್ರಶೇಖರ್ ವರ್ಮ ಉಪಸ್ಥಿತರಿದ್ದರು.