ವಿಟ್ಲ: ಗ್ರಾಮ ಮಟ್ಟದಲ್ಲಿ ಎಲ್ಲರೂ ಜೊತೆಗೆ ಸೇರಿ ಕೋವಿಡ್ ಹರಡದಂತೆ ಸಾಮೂಹಿಕವಾಗಿ ಪ್ರಯತ್ನಪಟ್ಟಾಗ ಮಾತ್ರ ನಮ್ಮ ಗ್ರಾಮವನ್ನು ಕೋವಿಡ್ ಮುಕ್ತ ಗ್ರಾಮವನ್ನಾಗಿ ಮಾಡಲು ಸಾಧ್ಯ ಎಂದು ವೀರಕಂಭ ಗ್ರಾಮದ ಗ್ರಾಮಕರಣಿಕ ಕರಿಬಸಪ್ಪರವರು ವೀರಕಂಭ ಗ್ರಾಮದ ರಾಜೀವಗಾಂಧಿ ಸಮುದಾಯ ಭವನದಲ್ಲಿ ವೀರಕಂಭ ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ರವರ ಅಧ್ಯಕ್ಷತೆಯಲ್ಲಿ ನಡೆದ ಕೋವಿಡ್ 19 ರ ಗ್ರಾಮ ಮಟ್ಟದ ಕೋವಿಡ್ ನಿರ್ಮೂಲನ ಕಾರ್ಯ ಪಡೆಯ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಕಿರಿಯ ಆರೋಗ್ಯ ಸಹಾಯಕಿ ಶ್ರೀಮತಿ ಜ್ಯೋತಿ ಕೆ ಅವರು ಈಗಾಗಲೇ ಗ್ರಾಮದಲ್ಲಿ ಅಲ್ಲಲ್ಲಿ ಡೆಂಗ್ಯೂ ಜ್ವರ ಕೆಲವರಲ್ಲಿ ಕಾಣಿಸಿಕೊಂಡಿದ್ದು ಕೂಡಲೇ ಪಂಚಾಯತ್ ವತಿಯಿಂದ ಫಾಗಿಂಗ್ ವ್ಯವಸ್ಥೆ ಮಾಡಿಸಬೇಕೆಂದು ತಿಳಿಸಿದರು. ಅದಕ್ಕೆ ಪಂಚಾಯತ್ ಅಧ್ಯಕ್ಷರು ವ್ಯವಸ್ಥೆ ಮಾಡಿಸುವುದಾಗಿ ಭರವಸೆ ನೀಡಿದರು.
ಸಭೆಯಲ್ಲಿ ಸೇರಿದ ಕಾರ್ಯಪಡೆಯ ಸದಸ್ಯರು ಗ್ರಾಮದಲ್ಲಿ ಪ್ರತಿ ವಾರ್ಡಿನಲ್ಲಿ ಉಪಸಮಿತಿಗಳನ್ನು ಮಾಡುವುದರ ಮೂಲಕ ಕಾರ್ಯಪಡೆಯನ್ನು ಇನ್ನಷ್ಟು ಬಲಿಷ್ಠ ಮಾಡಬೇಕೆಂದು ಒತ್ತಾಯಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಗಿರಿಜಾ ರವರು ಮಾತನಾಡಿ ಗ್ರಾಮದಲ್ಲಿರುವ ಸಂಘ ಸಂಸ್ಥೆಗಳು ಹಾಗೂ ದಾನಿಗಳ ಸಹಕಾರ ಪಡೆದು ಕೋವಿಡ್ ಕಾರಣದಿಂದಾಗಿ ಸಮಸ್ಯೆಗೆ ಒಳಗಾದವರಿಗೆ ಪರಿಹಾರ ಕಿಟ್ ನೀಡುವ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ವೀರಕಂಬ ಗ್ರಾಮ ಪಂಚಾಯತ್ ವತಿಯಿಂದ ಗ್ರಾಮದ ಆಶಾಕಾರ್ಯಕರ್ತೆಯರಿಗೆ ಆಕ್ಸೋಮೀಟರ್ ವಿತರಣೆ ಮಾಡಲಾಯಿತು. ಸಭೆಯಲ್ಲಿ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಶೀಲಾ ವೇಗಸ್ ಹಾಗೂ ಕಾರ್ಯಪಡೆಯ ಸರ್ವ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.