ಫಲಾನುಭವಿ ಕುಟುಂಬಕ್ಕೆ ಮನೆ ಹಸ್ತಾಂತರ


ವಿಟ್ಲ: ಕಳೆದ ವರ್ಷದ ಜಾತ್ರೆಯ ಸಂದರ್ಭದಲ್ಲಿ ವೇದಿಕೆಯಲ್ಲಿ ಅರ್ಹ ಫಲಾನುಭವಿ ಕುಟುಂಬವೊಂದಕ್ಕೆ ಮನೆ ನಿರ್ಮಿಸಿ ಕೊಡುವ ವಾಗ್ದಾನವನ್ನು ಮಾಡಿದ್ದು ಸಮರ್ಪಣ್ ವಿಟ್ಲ ಇದರ ಸೇವಾ ಪ್ರಕಲ್ಪದಲ್ಲಿ ಶ್ರೀ ಪಂಚಲಿಂಗೇಶ್ವರ ದೇವರ ಕಾಲಾವಧಿ ಜಾತ್ರೆಯ ಉತ್ಸವದಂದು ಫಲಾನುಭವಿ ಕುಟುಂಬವೊಂದಕ್ಕೆ ಮನೆ ನಿರ್ಮಿಸಿ ಹಸ್ತಾಂತರಿಸಲಾಯಿತು.
ಯಾರಿಗೆ ಸಮಾಜದಲ್ಲಿ ನಿಜವಾದ ಸಹಾಯದ ಅಗತ್ಯವಿದೆಯೋ ಅಂತಹವರನ್ನು ಗುರುತಿಸಿ ಆ ಬಂಧುಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಸಮಾಜ ಸೇವೆಗಾಗಿ ಸಮಾಜಮುಖಿ ಮನೋಭಾವದ , ರಾಷ್ಟ್ರೀಯವಾದಿ ಚಿಂತನೆಯುಳ್ಳ ಯುವಕರು ಒಟ್ಟು ಸೇರಿ ಹಿಂದೂ ಧರ್ಮದ ಸೇವಾಹಿ ಪರಮೋ ಧರ್ಮ : ಎಂಬ ಶ್ರೇಷ್ಠ ತತ್ವಾದರ್ಶದೊಂದಿಗೆ ಸೇವೆ ಸ್ವಾರ್ಥ ರಹಿತವಾಗಿರಲಿ ಎಂಬ ಧ್ಯೇಯ ವಾಕ್ಯದೊಂದಿಗೆ ಸಂಘಟಿಸಿದ ಸಂಘಟನೆಯೇ ಸಮರ್ಪಣ್ ವಿಟ್ಲ.

ಕಳೆದ ಹಲವಾರು ವರ್ಷಗಳಿಂದ ವಿಟ್ಲದಲ್ಲಿ ಧಾರ್ಮಿಕ ಕ್ಷೇತ್ರದಲ್ಲಿ ,ಸಾಮಾಜಿಕ ಕ್ಷೇತ್ರದಲ್ಲಿ ತನ್ನದೇ ಆದ ವಿಶಿಷ್ಟ ರೀತಿಯ ಸೇವೆಗಳನ್ನು ನಡೆಸಿಕೊಂಡು ಬಂದ ಸಮರ್ಪಣ್ ವಿಟ್ಲ ಸಂಘಟನೆ ವಿಟ್ಲದ ಜನತೆಯ ಮನದಲ್ಲಿ ಸದಾ ಹಸಿರು, ಧಾರ್ಮಿಕವಾಗಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ದೇವರ ಸನ್ನಿಧಿಯಲ್ಲಿ ಧನುರ್ಮಾಸದಲ್ಲಿ ನಡೆಯುವ ಧನು ಪೂಜೆಯ ಸಂದರ್ಭದಲ್ಲಿ ಭಕ್ತಾದಿಗಳಿಗೆ ಉಪಹಾರದ ವ್ಯವಸ್ಥೆ , ವಸಂತ ಮಾಸದಲ್ಲಿ ವಸಂತ ಪೂಜೆ , ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಜಾತ್ರೆಯ ಸಂದರ್ಭದಲ್ಲಿ ಸಹಕಾರ ಹಾಗೆಯೇ ಜಾತ್ರೆಯ ಸಂದರ್ಭ ವಿನೂತನ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮ ಅದಲ್ಲದೆ ಸಾಮಾಜಿಕ ಕ್ಷೇತ್ರದಲ್ಲಿ ಅಶಕ್ತರಿಗೆ ಆರ್ಥಿಕವಾದ ಸಹಾಯ , ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಅನಾರೋಗ್ಯ ಪೀಡಿತರಿಗೆ ಸಹಾಯ ಹಸ್ತ ನೀಡುತ್ತಾ ಬಂದಿದೆ.

ಕಳೆದ ವರ್ಷದ ಜಾತ್ರೆಯ ಸಂದರ್ಭದಲ್ಲಿ ಈ ವೇದಿಕೆಯಲ್ಲಿ ಅರ್ಹ ಫಲಾನುಭವಿ ಕುಟುಂಬವೊಂದಕ್ಕೆ ಮನೆ ನಿರ್ಮಿಸಿ ಕೊಡುವ ವಾಗ್ದಾನವನ್ನು ಮಾಡಿದ್ದು, ಹಾಗೆಯೇ ಗಮನಕ್ಕೆ ಬಂದ ನಾಲ್ಕು ಬೇಡಿಕೆಗಳಲ್ಲಿ ಅರ್ಹವಾದ ಕುಟುಂಬವೊಂದಕ್ಕೆ ಈ ಒಂದು ವರ್ಷ ಸಮಯದಲ್ಲಿ ಸುಸಜ್ಜಿತವಾದ ಉತ್ತಮ ಗುಣಮಟ್ಟದ ಮನೆಯನ್ನು ನಿರ್ಮಿಸಿ ಶ್ರೀ ಪಂಚಲಿಂಗೇಶ್ವರ ದೇವರ ಕಾಲಾವಧಿ ಜಾತ್ರೆಯ ಬಯ್ಯದ ಬಲಿ ಉತ್ಸವದ ಶುಭ ದಿನದಂದು ಮನೆಯನ್ನು ಫಲಾನುಭವಿ ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಸಮರ್ಪಣ್ ವಿಟ್ಲ ಇದರ ಸೇವಾ ಪ್ರಕಲ್ಪದಲ್ಲಿ ಕೈ ಜೋಡಿಸಿದಸಂಘಟನೆಯ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಮನೆ ನಿರ್ಮಿಸಲು ವಸ್ತುರೂಪದಲ್ಲಿ , ಆರ್ಥಿಕವಾಗಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ತಿಳಿಸಿದರು.
ಎಸ್ ಎಲ್ ವಿ ಬುಕ್ ಸಂಸ್ಥೆಯ ಮಾಲಕ ದಿವಾಕರ ದಾಸ್ ನೇರ್ಲಾಜೆ ಮಾತನಾಡಿ, ದುಡಿಮೆಯ ಒಂದಂಶವನ್ನು ಸಮಾಜ ಸೇವೆಗೆ ಮೀಸಲಿಡುವ ಸಂಸ್ಥೆಯವರ ಕಾರ್ಯವೈಖರಿ ಮೆಚ್ಚುಗೆಗೆ ಪಾತ್ರವಾಗಿದೆ. ಸಮಾಜ ಸೇವೆ ಮಾಡಲು ಇನ್ನೂ ಹೆಚ್ಚಿನ ಶಕ್ತಿ ಭಗವಂತ ನೀಡಲಿ. ನಿಮ್ಮ ಜೊತೆ ನಾನಿದ್ದೇನೆ ಎಂದರು.