ವಿಟ್ಲ: ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಪ್ರತಿಷ್ಠಿತ ಸಹಕಾರಿ ಸಂಸ್ಥೆಯಾದ ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ಸತತ ಎರಡನೇ ಬಾರಿಗೆ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿಂದ ನೀಡುವ ಸಾಧನಾ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
2022-23 ನೇ ಆರ್ಥಿಕ ವರ್ಷದಲ್ಲಿ ಬ್ಯಾಂಕ್ ತನ್ನ ಕಾರ್ಯ ದಕ್ಷತೆಯನ್ನು ಮೆರೆದು ದಾಖಲೆಯ ರೂ. 615.74 ಕೋಟಿಗಳ ವ್ಯವಹಾರವನ್ನು ಮಾಡಿರುತ್ತದೆ. ರೂ. 120.19 ಕೋಟಿ ರೂಪಾಯಿಗಳ ಠೇವಣಿ ಹೊಂದಿದ್ದು, ಸದಸ್ಯರ ಹೊರಬಾಕಿ ಸಾಲ ರೂ. 67.90 ಕೋಟಿ, ಸಾಲ ವಸೂಲಾತಿ ಪ್ರಮಾಣ ಶೇಕಡಾ 91.54 ರಷ್ಟಿದ್ದು. ವರದಿ ವರ್ಷದಲ್ಲಿ ರೂ. 2.61 ಕೋಟಿ ಲಾಭಗಳಿಸಿದ್ದು, ಪ್ರಸ್ತುತ ಬ್ಯಾಂಕಿನ ದುಡಿಯುವ ಬಂಡವಾಳ 145 ಕೋಟಿಗಳಾಗಿರುತ್ತದೆ.
ಬ್ಯಾಂಕ್ ಹಲವಾರು ವರ್ಷಗಳಿಂದ ಅಡಿಟ್ ವರ್ಗಿಕರಣದಲ್ಲಿ ‘ಎ’ ತರಗತಿಯನ್ನು ಹೊಂದಿದ್ದು, ಈ ಎಲ್ಲಾ ಸಾಧನೆಗಳನ್ನು ಗುರುತಿಸಿ, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಡಾ||. ಎಂ.ಎನ್ ರಾಜೇಂದ್ರ ಕುಮಾರ್ ಇವರು ಆ.19ರಂದು ಜರಗಿದ ಬ್ಯಾಂಕಿನ ಮಹಾ ಸಭೆಯಲ್ಲಿ ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಹೆಚ್.ಜಗನ್ನಾಥ್ ಸಾಲಿಯಾನ್ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಕೃಷ್ಣ ಮುರಳಿ ಶ್ಯಾಮ್.ಕೆ ಇವರಿಗೆ ಶಾಲು ಹೊದಿಸಿ ಸನ್ಮಾನಿಸಿ ಪ್ರಶಸ್ತಿಯನ್ನು ನೀಡಿದರು. ಈ ಸಂದರ್ಭದಲ್ಲಿ ಬ್ಯಾಂಕಿನ ನಿರ್ದೇಶಕ ವಿಶ್ವನಾಥ, ಎಂ ಮತ್ತು ಮನೋರಂಜನ್ ಕೆ.ಆರ್ ಉಪಸ್ಥಿತರಿದ್ದರು.