




ವಿಟ್ಲ: ಟೊಯೋಟಾ ಕಿರ್ಲೋಸ್ಕರ್ ಮೋಟಾರ್, ಬೆಂಗಳೂರು ಇವರ ಸಹಯೋಗದಲ್ಲಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ) ವಿಟ್ಲದಲ್ಲಿ ಸುಮಾರು 30ಲಕ್ಷ ವೆಚ್ಚದ “ಟೊಯೋಟಾ ಸ್ಕಿಲ್ಲಿಂಗ್ ಇಕೋ ಸಿಸ್ಟಮ್ ಡೆವಲಪ್ಮೆಂಟ್ ಪ್ರಯೋಗಾಲಯವನ್ನು ನಿರ್ಮಿಸಿ ಉಚಿತವಾಗಿ ಹಸ್ತಾಂತರ ಮಾಡುವ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಉದ್ಘಾಟಕರು ಹಾಗೂ ಟೊಯೊಟಾ ಸಂಸ್ಥೆಯ ವತಿಯಿಂದ ಸನ್ಮಾನಿತರಾದ ಕೇಶವ ಅಮೈ, ಸಂಸ್ಥಾಪಕ ನಿರ್ದೇಶಕರು SRK Ladders Puttur ಮಾತನಾಡಿ ಐಟಿಐ ಸಂಸ್ಥೆಯು ಕೈಗಾರಿಕೆಗಳಿಗೆ ನುರಿತ ಮಾನವ ಸಂಪನ್ಮೂಲ ಒದಗಿಸುವ ಸಂಸ್ಥೆಯಾಗಿದ್ದು ವಿದ್ಯಾರ್ಥಿಗಳು ಕೈಗಾರಿಕೆಗಳಿಗೆ ಕೌಶಲ್ಯಾಭಿವೃದ್ಧಿ, ನವೀನ ತಾಂತ್ರಿಕ ಜ್ಞಾನ ಮತ್ತು ಉದ್ಯೋಗಾವಕಾಶ ವಿಸ್ತರಿಸುವಲ್ಲಿ ಈ ಪ್ರಯೋಗಾಲಯ ಮಹತ್ವದ ಪಾತ್ರ ವಹಿಸುವುದಾಗಿ ಪ್ರಶಂಸಿಸಿದರು. ಮುಖ್ಯ ಅತಿಥಿಗಳಾಗಿ ಟೊಯೊಟಾ ಮೋಟಾರ್ಸ್ ಪ್ರೈವೇಟ್ ಲಿಮಿಟೆಡ್ ಬೆಂಗಳೂರು ಇದರ ಪ್ರೊಡಕ್ಷನ್ ವಿಭಾಗದ ವ್ಯವಸ್ಥಾಪಕ ವಿವಿಯನ್ ಫ್ರಾನ್ಸಿಸ್ ಡಿಸೋಜಾ ಮಾತನಾಡಿ ಮಾನ್ಯ ಪ್ರಧಾನ ಮಂತ್ರಿಗಳ ಗೋ ಇಂಡಿಯಾ ಮತ್ತು ಗೋ ವಿತ್ ಇಂಡಿಯಾ ಎಂಬ ಪರಿಕಲ್ಪನೆಯೊಂದಿಗೆ ಕರ್ನಾಟಕದಲ್ಲಿ ಸುಮಾರು 105 ಟೆಕ್ನಿಕಲ್ ಇನ್ಸ್ಟಿಟ್ಯೂಟ್ಗಳಿಗೆ ಸರ್ಕಾರದೊಂದಿಗೆ ಈ ಯೋಜನೆ ವಿಸ್ತರಿಸಲಾಗಿದ್ದು ವಿದ್ಯಾರ್ಥಿಗಳು ಇದನ್ನು ಸಮರ್ಪಕವಾಗಿ ಉಪಯೋಗಿಸಬೇಕೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಐಎಂಸಿ ವೈಸ್ ಚೇರ್ಮನ್ ಹಾಗೂ ವೆಂಕಟೇಶ್ವರ ಪ್ರೊಸೆಸರ್ ಸಂಸ್ಥೆಯ ಉದ್ಯಮಿಗಳಾದ ಸುಬ್ರಾಯ ಪೈ ಮಾತನಾಡಿ ಕೈಗಾರಿಕೆ ಮತ್ತು ಶಿಕ್ಷಣ ಸಂಸ್ಥೆ ನಡುವಣ ಸೇತುವೆಯನ್ನು ಬಲಪಡಿಸುವ TKM ಸಂಸ್ಥೆಯ ಸಾಮಾಜಿಕ ಜವಾಬ್ದಾರಿಯ ಮುಂದಾಳುತ್ವವನ್ನು ಅವರು ಮೆಚ್ಚಿದರು. ಇನ್ನೋರ್ವ ಅತಿಥಿ ವಿರಾಜ್ ಸಂಸ್ಥಾಪಕರು ಹಾಗು ಉದ್ಯಮಿಗಳು, ಶ್ರೀ ವಿಶ್ವೇಶ್ವರ ಎಂಟರ್ಪ್ರೈಸಸ್ ವಿಟ್ಲ ತಮ್ಮ ಅನಿಸಿಕೆಯಲ್ಲಿ ವಿದ್ಯಾರ್ಥಿಗಳು ಅತ್ಯಾಧುನಿಕ ಯಂತ್ರೋಪಕರಣಗಳು ಮತ್ತು ಕೈಗಾರಿಕಾ ತರಬೇತಿ ಸೌಲಭ್ಯಗಳನ್ನು ಪಡೆಯಲಿರುವುದರಿಂದ, ಕೈಗಾರಿಕಾ ಕ್ಷೇತ್ರದಲ್ಲಿ ಉದ್ಯೋಗಾವಕಾಶ ಸೃಷ್ಟಿಯ ದಿಟ್ಟ ಹೆಜ್ಜೆಯಾಗಲಿದೆ ಎಂದು ತಿಳಿಸಿದರು. ಸಂಸ್ಥೆಯ ಪ್ರಾಚಾರ್ಯರಾದ ಹರೀಶ್ರವರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಈ ಪ್ರಯೋಗಾಲಯ ಮಹತ್ವದ ಶೈಕ್ಷಣಿಕ ಸಂಪನ್ಮೂಲವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಂಸ್ಥೆಯಲ್ಲಿ 2 ವಾರಗಳ ಕಾಲ ಐಟಿಐ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಿದ ಟೊಯೊಟಾ ಸಂಸ್ಥೆಯ ತರಬೇತಿ ಅಧಿಕಾರಿಗಳಾದ ರೋಷನ್ ಹಾಗು ಶಾಲಿನಿ ಇವರನ್ನು ಸಂಸ್ಥೆಯ ವತಿಯಿಂದ ಹಾಗು ವಿದ್ಯಾರ್ಥಿಗಳಿಂದ ಗೌರವಿಸಲಾಯಿತು.

ಕಿರಿಯ ತರಬೇತಿ ಅಧಿಕಾರಿಗಳಾದ ರತಿ ವಿ ಸ್ವಾಗತಿಸಿ, ಸನ್ಮಾನಿತರ ಕಿರು ಪರಿಚಯವನ್ನು ತೀರ್ಥಾಕ್ಷಿ.ಎನ್ ವಾಚಿಸಿ, ಶರತ್ ಕುಮಾರ್ ವಂದಿಸಿದರು. ವಿದ್ಯಾರ್ಥಿ ಪವನ್ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಅಧ್ಯಾಪಕ ವೃಂದ ವಿದ್ಯಾರ್ಥಿಗಳು ಭಾಗವಹಿಸಿದರು.








