ವಿಟ್ಲ: ವಿಟ್ಲ ಸಮೀಪದ ಮೇಗಿನಪೇಟೆ ಎಂಬಲ್ಲಿ ಒಂಟಿ ಮಹಿಳೆಯಿರುವ ಮನೆಗೆ ನುಗ್ಗಿ ಹಲ್ಲೆ ನಡೆಸಿ, ಕೈಕಾಲು ಕಟ್ಟಿ ಹಾಕಿ ದರೋಡೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ದರೋಡೆಗೆ ಯತ್ನ ಪ್ರಕರಣ ದಾಖಲಾಗಿದ್ದು, ಘಟನೆಗೆ ಕಾರಣ ಇನ್ನೂ ನಿಗೂಢವಾಗಿದೆ. ಕೇವಲ ಒಬ್ಬ ವ್ಯಕ್ತಿ ಈ ಕೃತ್ಯ ಎಸೆಗಿದ್ದಾನೆ ಎಂದು ತಿಳಿದು ಬಂದಿದೆ.
ಮೇಗಿನಪೇಟೆ ನಿವಾಸಿ, ಒಂಟಿಯಾಗಿ ಜೀವನ ನಡೆಸುತ್ತಿರುವ ಲಲಿತಾ(೪೫) ಅವರ ಮನೆಯ ಮುಂಬಾಗಿಲು ಮೂಲಕ ನುಗ್ಗಿ ಮಹಿಳೆಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ, ಬಳಿಕ ಬಾಯಿಗೆ ಬಟ್ಟೆ ತುರುಕಿ, ಕೈ ಕಾಲು ಕಟ್ಟಿ ಹಾಕಿದ್ದಾರೆ. ಟೇಬಲ್ ಮೇಲಿದ್ದ ಬೀಗ ಮತ್ತು ಲಾಕ್ ಅನ್ನು ತೆಗೆದು ಮನೆ ಮುಂಭಾಗದ ಬಾಗಿಲಿಗೆ ಬೀಗ ಹಾಕಿ ಪರಾರಿಯಾಗಿದ್ದರು.
ಹಲ್ಲೆ ನಡೆಸಿದ ವ್ಯಕ್ತಿ ಯಾವುದೇ ವಸ್ತುಗಳನ್ನು ಕೂಡ ಮುಟ್ಟಲಿಲ್ಲ. ಚಿನ್ನದ ಸರ ಕುತ್ತಿಗೆಯಲ್ಲಿ ಹಾಗೆಯೇ ಉಳಿದುಕೊಂಡಿದೆ.
ಇದು ದರೋಡೆ ಯತ್ನವೇ ಅಥವಾ ಹಳೆ ದ್ವೇಷದ ಕೃತ್ಯವೇ ಎಂಬುದು ಇನ್ನೂ ನಿಗೂಢವಾಗಿದ್ದು, ಪೊಲೀಸರ ತನಿಖೆಯ ಬಳಿಕವಷ್ಟೇ ಹೊರಬೀಳಲಿದೆ.
ಮಹಿಳೆಯ ಮುಖಕ್ಕೆ ಮತ್ತು ಎದೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವಿಟ್ಲ ಎಸೈ ವಿನೋದ್ ಕುಮಾರ್ ರೆಡ್ಡಿ ನೇತೃತ್ವದಲ್ಲಿ ತನಿಖೆ ಮುಂದುವರೆದಿದೆ.