ವಿಟ್ಲ : ವಿಟ್ಲ ತಾಲೂಕು ರಚನಾ ಸಮಿತಿಯ ಸಮಾಲೋಚನಾ ಸಭೆಯು ವಿಟ್ಲ ಶ್ರೀ ಪಂಚಲಿ0ಗೇಶ್ವರ ಸದನದಲ್ಲಿ ನಡೆಯಿತು. ಸಭೆಯನ್ನು ಉದ್ಘಾಟಿಸಿದ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಸಂಜೀವ ಮಠಂದೂರು ತಾಲೂಕು ರಚನೆಗೆ ಸಂಬ0ಧಿಸಿದ0ತೆ ಮಾಡಬೇಕಾದ ಕಾರ್ಯಗಳನ್ನು ವಿವರಿಸಿ, ತನ್ನ ಸಂಪೂರ್ಣ ಸಹಕಾರ ಹಾಗೂ ಬೆಂಬಲವನ್ನು ಘೋಷಿಸಿದರು.
ಹಲವಾರು ವರುಷಗಳಿಂದ ತಾಲೂಕಿನ ಹೋರಾಟದಲ್ಲಿ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸಿದ ಮುರುವ ಮಹಾಬಲ ಭಟ್ ವಿಟ್ಲ ತಾಲೂಕು ಆಗಲು ಇರುವ ಅರ್ಹತೆಯ ಬಗ್ಗೆ ಮಾತನಾಡಿದರು. ವಿಟ್ಲ ಅರಮನೆಯ ಕೃಷ್ಣಯ್ಯ ಅವರು ಶುಭಹಾರೈಸಿದರು. ತಾಲೂಕು ರಚನಾ ಸಮಿತಿಯ ನೂತನ ಅಧ್ಯಕ್ಷರನ್ನಾಗಿ ವಿಟ್ಲದ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ಅವರನ್ನು ಸರ್ವಾನುಮತದಿಂದ ಆಯ್ಕೆಮಾಡಲಾಯಿತು. ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮಾತನಾಡಿದ ಅವರು ಎಲ್ಲರ ಸಹಕಾರವನ್ನು ಕೋರಿ, ಪಕ್ಷ ಜಾತಿ ಧರ್ಮ ಮರೆತು ತಾಲೂಕು ರಚನೆಗೆ ಶಕ್ತಿ ಮೀರಿ ಶ್ರಮಿಸೋಣ, ಆದಷ್ಟು ಬೇಗ ಪೂರ್ಣಪ್ರಮಾಣದ ಸಮಿತಿ ಹಾಗೂ ಗ್ರಾಮ ಸಮಿತಿಗಳ ರಚನೆ ಮಾಡುವ ಕೆಲಸವನ್ನು ಮಾಡಿ ಮುಂದಿನ ದಿನದಲ್ಲಿ ದೊಡ್ಡ ಮಟ್ಟದ ಸಮಾವೇಶವನ್ನು ಮಾಡುವ ಬಗ್ಗೆ ಮಾತನಾಡಿದರು.
ವಿಷ್ಣು ಭಟ್ ಅಡ್ಡೇಯಿ, ಅಶ್ರಫ್ ವಿಕೆಎಂ, ಮಾಧವ ಮಾವೆ, ಸೇಸಪ್ಪ ಬೆದ್ರಕಾಡು, ಶ್ರೀಧರ ಗೌಡ ಪೆರ್ನೆ, ಕೃಷ್ಣ ನಾಯ್ಕ ಅಗರ್ತಬೈಲು, ವೀರಪ್ಪ ಗೌಡ, ರಾಜಾರಾಮ ಶೆಟ್ಟಿ , ಸುದರ್ಶನ ಪಡಿಯಾರ್ ತಮ್ಮ ಅನಿಸಿಕೆಗಳನ್ನು ಹೇಳಿದರು. ರಾಜೀವ್ ಭಂಡಾರಿ ಪ್ರಸ್ತಾವಿಕ ಮಾತನಾಡಿದರು. ಗೋವರ್ಧನ್ ಇಡ್ಯಾಲ ಪ್ರಾರ್ಥಿಸಿದರು, ಶ್ರೀಕೃಷ್ಣ ವಿಟ್ಲ ಸ್ವಾಗತಿಸಿದರು, ಪುನೀತ್ ಮಾಡತ್ತಾರ್ ವಂದಿಸಿದರು, ರಾಜೇಶ್ ಆರ್.ಕೆ. ಆರ್ಟ್ಸ್ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷರುಗಳಾದ ಜಗನ್ನಾಥ ಸಾಲ್ಯಾನ್, ಜಯಶ್ರೀ ಕೋಡಂದೂರು ಸಹಿತ ಪ್ರಸ್ತಾವಿತ ತಾಲೂಕು ವ್ಯಾಪ್ತಿಯ ಜನಪ್ರತಿನಿಧಿಗಳು, ಮುಖಂಡರು ಉಪಸ್ಥಿತರಿದ್ದರು.
ಸಮಿತಿಯ ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು.
ಅಧ್ಯಕ್ಷರಾಗಿ ಪದ್ಮನಾಭ ಕೊಟ್ಟಾರಿ, ಗೌರವಾಧ್ಯಕ್ಷರಾಗಿ ಸಂಜೀವ ಮಠಂದೂರು, ಗೌರವ ಸಲಹೆಗಾರರಾಗಿ ರಂಗಮೂರ್ತಿ ಎಸ್.ಆರ್ ಪುಣಚ, ರುಕ್ಮಯ್ಯ ಪೂಜಾರಿ, ಮುರುವ ಮಹಾಬಲ ಭಟ್, ಕೃಷ್ಣಯ್ಯ ವಿಟ್ಲ ಅರಮನೆ, ಪ್ರಧಾನ ಕಾರ್ಯದರ್ಶಿಯಾಗಿ ರಾಜೀವ ಭಂಡಾರಿ, ಶ್ರೀಕೃಷ್ಣ ವಿಟ್ಲ, ಪುನೀತ್ ಮಾಡತ್ತಾರ್, ಸಂಘಟನಾ ಕಾರ್ಯದರ್ಶಿಯಾಗಿ ವಿಶ್ವನಾಥ ವೀರಕಂಭ, ಉದಯ ಕುಮಾರ್ ಆಲಂಗಾರು ಆಯ್ಕೆಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಪೂರ್ಣಪ್ರಮಾಣದ ಸಮಿತಿ ಹಾಗೂ ಗ್ರಾಮ ಸಮಿತಿಗಳನ್ನು ರಚಿಸಲಾಗುವುದು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.