ಅಪಘಾತವಾದ ಕಾರಿನಲ್ಲಿ ಸಿ.ಟಿ.ರವಿ ಭಾವಚಿತ್ರವುಳ್ಳ ಕ್ಯಾಲೆಂಡರ್, ಮದ್ಯ ಹಾಗೂ ಲಾಂಗ್ ಪತ್ತೆಯಾದ ಘಟನೆ ಚಿಕ್ಕಮಗಳೂರು ನಗರದ ಎಐಟಿ ಸರ್ಕಲ್ನಲ್ಲಿ ನಡೆದಿದ್ದು, ಇದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಕಾರುವೊಂದರ ಬ್ರೇಕ್ ಡೌನ್ ಆಗಿ ಅಪಘಾತ ಸಂಭವಿಸಿದ ಘಟನೆ ಚಿಕ್ಕಮಗಳೂರು ನಗರದ ಎಐಟಿ ಸರ್ಕಲ್ನಲ್ಲಿ ತಡರಾತ್ರಿ ನಡೆದಿದೆ. ಈ ವೇಳೆ ಕಾರು ತಳ್ಳಲು ಮುಂದಾದಾಗ ಚಾಲಕ ಹಾಗೂ ಅಲ್ಲಿದ್ದವರ ನಡುವೆ ಮಾತಿನ ಚಕಮಕಿಯೂ ನಡೆದಿದೆ. ಇದೇ ವೇಳೆ ಕಾರಿನಲ್ಲಿ ಮದ್ಯ, ಲಾಂಗ್ ಹಾಗೂ ಸಿ.ಟಿ.ರವಿ ಭಾವಚಿತ್ರವುಳ್ಳ ಕ್ಯಾಲೆಂಡರ್ ಕೂಡ ಪತ್ತೆಯಾಗಿದೆ.
ಇನ್ನು ಘಟನಾ ಸ್ಥಳದಲ್ಲಿ ಜಮಾಯಿಸಿದ್ದ ಸ್ಥಳೀಯರು ಕಾರಿನಲ್ಲಿದ್ದ ಮದ್ಯ, ಕ್ಯಾಲೆಂಡರ್, ಲಾಂಗ್ ಅನ್ನು ಹೊರತೆಗೆದಿದ್ದಾರೆ. ಈ ವೇಳೆ ಪರಾರಿಯಾಗಲು ಯತ್ನಿಸಿದ ಕಾರು ಚಾಲಕನನ್ನು ಹಿಡಿದು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ. ಹಾಗೆಯೇ ಕಾರಿನಲ್ಲಿ ಸಿಕ್ಕಂತಹ ಮಾರಕ ಅಸ್ತ್ರಗಳನ್ನು ಪರಿಶೀಲನೆಗೆ ಬಂದಂತಹ ನಗರ ಪೊಲೀಸರಿಗೆ ಒಪ್ಪಿಸಲಾಗಿದೆ.
ಅಪಘಾತದ ವೇಳೆ ಕಾರು ಪರಿಶೀಲಿಸಿದ ಸ್ಥಳೀಯರು ಲಕ್ಷಾಂತರ ಮೌಲ್ಯದ ಮದ್ಯ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿಯವರ ಭಾವಚಿತ್ರ ಕಂಡು ದಿಗ್ಭ್ರಮೆಗೊಂಡಿದ್ದಾರೆ. ಅಲ್ಲದೇ ಈ ವೇಳೆ ಆಕ್ರೋಶಗೊಂಡಿದ್ದ ಕೆಲವು ಸ್ಥಳೀಯರು ಸಿ.ಟಿ.ರವಿ ವಿರುದ್ಧ ಒ.ಟಿ.ರವಿ ಎಂದು ಘೋಷಣೆ ಮೊಳಗಿಸಿದ್ದಾರೆ. ವಿಧಾನಸಭೆ ಚುನಾವಣೆ ಸಮಯದಲ್ಲೇ ಲಕ್ಷಾಂತರ ಮೌಲ್ಯದ ಮಾಲ್ಗಳು, ಹಾಗೂ ಬಿಜೆಪಿ ನಾಯಕನ ಭಾವಚಿತ್ರ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.