ಮುಂಬೈ: ರಾಜಸ್ಥಾನದ ಉದಯಪುರದಲ್ಲಿ ಟೈಲರ್ ಕನ್ಹಯ್ಯ ಲಾಲ್ ಹತ್ಯೆಗೂ ಮುನ್ನವೇ ಮಹಾರಾಷ್ಟ್ರದಲ್ಲಿ ಮತ್ತೊಬ್ಬ ಹಿಂದು ವ್ಯಕ್ತಿಯ ಕತ್ತು ಸೀಳಿ ದುಷ್ಕರ್ಮಿಗಳು ಕೊಂದಿದ್ದಾರೆ ಎಂಬ ಆಘಾತಕಾರಿ ವಿಷಯ ತಡವಾಗಿ ಬೆಳಕಿಗೆ ಬಂದಿದೆ.
ಪ್ರವಾದಿ ಮುಹಮ್ಮದ್ ಕುರಿತು ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿರುವ ಬಿಜೆಪಿ ನಾಯಕಿ ನೂಪುರ್ ಶರ್ಮಾರನ್ನು ಬೆಂಬಲಿಸಿ, ಪೋಸ್ಟ್ ಹಾಕಿದ್ದ ಹಿಂದು ವ್ಯಕ್ತಿ ಟೈಲರ್ ಕನ್ಹಯ್ಯ ಎಂಬಾತನನ್ನು ರಾಜಸ್ಥಾನದ ಉದಯಪುರದಲ್ಲಿ ಜೂ.28ರಂದು ಕಿಡಿಗೇಡಿಗಳು ಬರ್ಬರವಾಗಿ ಹತ್ಯೆ ಮಾಡಿ ವಿಡಿಯೋ ಹರಿಯಬಿಟ್ಟಿದ್ದರು.
ಈ ಹತ್ಯೆ ಪ್ರಕರಣ ದೇಶಾದ್ಯಂತ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸಿದೆ. ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿ ಎಲ್ಲೆಡೆ ವ್ಯಾಪಕ ಪ್ರತಿಭಟನೆ ನಡೆಯುತ್ತಿದೆ. ಇದೀಗ ಟೈಲರ್ ಕನ್ಹಯ್ಯ ಹತ್ಯೆಗೂ ಮುನ್ನವೇ ನೂಪುರ್ ಶರ್ಮಾರನ್ನು ಬೆಂಬಲಿಸಿದ್ದ ಮತ್ತೊಬ್ಬ ಹಿಂದು ವ್ಯಕ್ತಿಯನ್ನು ಮಹಾರಾಷ್ಟ್ರದಲ್ಲಿ ಕೊಲೆ ಮಾಡಲಾಗಿದೆ ಎಂಬುದು ಗೊತ್ತಾಗಿದೆ. ನೂಪುರ್ ಶರ್ಮಾ ಹೇಳಿಕೆ ಬೆಂಬಲಿಸಿ ವಾಟ್ಸ್ಆಯಪ್ನಲ್ಲಿ ಸಂದೇಶವೊಂದನ್ನು ಶೇರ್ ಮಾಡಿದ್ದರು. ಕೆಲವು ಮುಸ್ಲಿಮರು ಹಾಗೂ ತಮ್ಮ ಗ್ರಾಹಕರು ಸದಸ್ಯರಾಗಿರುವ ಗ್ರೂಪ್ಗಳಲ್ಲಿ ಕೂಡ ಅವರು ಸಂದೇಶವನ್ನು ಹಂಚಿಕೊಂಡಿದ್ದರು’ ಎಂದು ಕೊತ್ವಾಲಿ ನಗರ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕನ್ಹಯ್ಯ ಲಾಲ್ ಕೊಲೆಯಾಗುವ ಒಂದು ವಾರದ ಮೊದಲೇ ಅಂದರೆ, ಜೂ.21ರಂದು ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ 54 ವರ್ಷದ ರಸಾಯನಶಾಸ್ತ್ರಜ್ಞ ಉಮೇಶ್ ಪ್ರಹ್ಲಾದರಾವ್ ಅವರನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಉಮೇಶ್ ಪ್ರಹ್ಲಾದ್ ರಾವ್ ಅಮರಾವತಿಯಲ್ಲಿ ಮೆಡಿಕಲ್ ಸ್ಟೋರ್ ನಡೆಸುತ್ತಿದ್ದರು. ಮಹಿಳಾ ಕಾಲೇಜು ಪ್ರೌಢಶಾಲೆಯ ಗೇಟ್ ಬಳಿ ಬೈಕ್ನಲ್ಲಿ ಮೂವರು ದುಷ್ಕರ್ಮಿಗಳು ಉಮೇಶ್ನನ್ನು ಅಡ್ಡ ಗಟ್ಟಿದರು. ಅವರಲ್ಲಿ ಒಬ್ಬಾತ ಉಮೇಶ್ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ. ಆಗ ಅಲ್ಲೇ ಇದ್ದ ಉಮೇಶ್ನ ಪತ್ನಿ ಮತ್ತು ಮಗ ಸಹಾಯಕ್ಕಾಗಿ ಕೂಗಲು ಪ್ರಾರಂಭಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮೂವರು ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ತಕ್ಷಣ ಉಮೇಶ್ನನ್ನು ಆಸ್ಪತ್ರೆಗೆ ಸಾಗಿಸಲಾದರೂ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಉಮೇಶ್ ಪ್ರಹ್ಲಾದರಾವ್ ಅವರ ಪುತ್ರ ಸಂಕೇತ್ ನೀಡಿದ ದೂರು ಮೇರೆಗೆ ಅಮರಾವತಿಯ ಸಿಟಿ ಕೊತ್ವಾಲಿ ಠಾಣೆಯ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಮುದ್ದ್ಸಿರ್ ಅಹ್ಮದ್ (22), ಶಾರುಖ್ ಪಠಾಣ್ (25), ಅಬ್ದುಲ್ ತೌಫಿಕ್ (24), ಶೋಯೆಬ್ ಖಾನ್ (22), ಅತಿಬ್ ರಶೀದ್ (22) ಬಂಧಿತ ಆರೋಪಿಗಳಾಗಿದ್ದರೆ. ಹಮೀಮ್ಅಹ್ಮದ್, ಫಿರೋಜ್ ಅಹ್ಮದ್ ತಲೆಮರೆಸಿಕೊಂಡಿದ್ದಾರೆ.