ಬಂಟ್ವಾಳ: ಏಷ್ಯಾ ಅಂತರಾಷ್ಟ್ರೀಯ ಸಾಂಸ್ಕೃತಿಕ ಅಕಾಡೆಮಿ ಕೊಡ ಮಾಡುವ ಗೌರವ ಡಾಕ್ಟರೇಟ್ ಪದವಿಯು ಅಭಿಮತ ವಾಹಿನಿಯ ಮುಖ್ಯಸ್ಥೆ ಮಮತಾ ಪ್ರವೀಣ್ ಶೆಟ್ಟಿ ಇವರಿಗೆ ತಮಿಳುನಾಡಿನ ಕ್ಲಾರೆಪ್ಟ ಹೋಟೆಲ್ ನ ಸಭಾಂಗಣದಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಮಾಧ್ಯಮ ಕ್ಷೇತ್ರದ ಅಪ್ರತಿಮ ಸಾಧನೆಯನ್ನು ಗುರುತಿಸಿ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಯಿತು.
ಬಂಟ್ವಾಳ ತಾಲೂಕಿನ ನಿವಾಸಿಯಾಗಿರುವ ಮಮತಾ ಪ್ರವೀಣ್ ಶೆಟ್ಟರು ತನ್ನ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಬಂಟ್ವಾಳ ತಾಲೂಕಿನ ಮಂಚಿಯಲ್ಲಿ ಪೂರೈಸಿದವರಾಗಿದ್ದು ಪದವಿ ಶಿಕ್ಷಣವನ್ನು ಮಂಗಳೂರು ವಿಶ್ವವಿದ್ಯಾಲಯದಿಂದ ಪಡೆದಿರುತ್ತಾರೆ. ಬಾಲ್ಯದಿಂದಲೇ ನೃತ್ಯ ನಿರೂಪಣೆ, ನಾಟಕ, ಹಾಗೂ ಕ್ರೀಡೆಯಲ್ಲಿ ಆಸಕ್ತಿ ಹೊಂದಿದವರಾಗಿದ್ದು ಇದುವರೆಗೆ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಹಲವು ವರ್ಷಗಳ ಕಾಲ ಕರ್ನಾಟಕದ ಖಾಸಗಿ ಸುದ್ದಿ ವಾಹಿನಿಗಳಲ್ಲಿ ಕೆಲಸ ನಿರ್ವಹಿಸಿ ಅನುಭವ ಗಳಿಸಿದ ಮಮತಾರವರು ನ೦ತರದಲ್ಲಿ ತನ್ನದೇ ಮಾಲಕತ್ವದ ಅಭಿಮತ ದೃಶ್ಯ ಮಾಧ್ಯಮ ಸಂಸ್ಥೆಯನ್ನು ಸ್ಥಾಪಿಸಿ ಯಶಸ್ಸು ಗಳಿಸಿ, ಕರ್ನಾಟಕ ರಾಜ್ಯದಲ್ಲಿ ಸುದ್ದಿ ವಾಹಿನಿಯೊಂದನ್ನು ನಡೆಸುತ್ತಿರುವ ಮೊದಲ ಹಾಗೂ ಏಕೈಕ ಮಹಿಳೆ.
ದೃಶ್ಯ ಮಾಧ್ಯಮದ ಜೊತೆಗೆ ಸೋಶಿಯಲ್ ಮೀಡಿಯಾಗಳಲ್ಲೂ ಸುದ್ದಿ ಪ್ರಕಟಿಸುವ ಇವರು ಮುಂದಿನ ದಿನಗಳಲ್ಲಿ ಕರಾವಳಿ ಕರ್ನಾಟಕದ ಎಲ್ಲ ಕಡೆಗಳಿಗೆ ದೃಶ್ಯಮಾಧ್ಯಮವನ್ನು ವಿಸ್ತರಿಸುವ ಯೋಚನೆಯುಳ್ಳವರಾಗಿದ್ದು ಇವರ ಈ ಎಲ್ಲಾ ಸಾಧನೆಯನ್ನು ಗುರುತಿಸಿ ಅಂತರರಾಷ್ಟ್ರೀಯ ಸಾಂಸ್ಕೃತಿಕ ಅಕಾಡೆಮಿ ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಿದೆ.