ಮಂಗಳೂರು
: ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಗೆ ಸಂಬಂಧಿಸಿದಂತೆ 3 ಹಂತಕರನ್ನು ಬಂಧಿಸಲಾಗಿದೆ. ಆ ಮೂಲಕ ಬಂಧಿತರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಹಂತಕರು ಯರ್ಯಾರು.? ಇವರ ಪ್ಲಾನ್ ಹೇಗಿತ್ತು.! ಇಷ್ಟು ದಿನ ಹೇಗೆಲ್ಲಾ ಅಡಗಿಕೊಂಡಿದ್ರು.! ಎಲ್ಲಾ ಮಾಹಿತಿ ಇಲ್ಲಿದೆ..
ಹಂತಕರು.?
ಹಂತಕರನ್ನು ಸುಳ್ಯದ ಶಿಯಾಬುದ್ದೀನ್ ಅಲಿಯಾಸ್ ಶಿಯಾಬ್(33), ಮಾಡಾವು ಅಂಕತಡ್ಕದ ರಿಯಾಜ್ (27), ಸುಳ್ಯದ ಎಲಿಮಲೆಯ ಬಶೀರ್ (23) ಎನ್ನಲಾಗಿದೆ. ಬಂಧಿತ ಪ್ರಮುಖ ಆರೋಪಿಗಳಲ್ಲಿ ರಿಯಾಜ್ ಕೋಳಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಶಿಯಾಬ್ ಫ್ಯಾಕ್ಟರಿಯೊಂದಕ್ಕೆ ಕೊಕ್ಕೋ ಪೂರೈಸುತ್ತಿದ್ದ. ಬಶೀರ್ ಹೋಟೆಲ್ ವೊಂದರಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
ಪ್ರವೀಣ್ ಹತ್ಯೆಗೆ ಆರೋಪಿಗಳ ಪ್ಲಾನ್ ಹೇಗಿತ್ತು.?
ಜುಲೈ 21ರಂದು ಬೆಳ್ಳಾರೆಯಲ್ಲೇ ಸಂಘ ಪರಿವಾರದ ಪ್ರಮುಖನ ಹತ್ಯೆಗೆ ಹಂತಕರು ಸ್ಕೆಚ್ ಹಾಕಿದ್ದರು.! ಬೆಳ್ಳಾರೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಕ್ರೀಯ ಕಾರ್ಯಕರ್ತರಾಗಿದ್ದ ಪ್ರವೀಣ್ ನೆಟ್ಟಾರು ಕೋಳಿ ಉದ್ಯಮವನ್ನೂ ಆರಂಭಿಸಿ ಯಶಸ್ವಿಯಾಗಿದ್ದರು. ಹೀಗಾಗಿ ಪ್ರವೀಣ್ ಅವರನ್ನು ಹತ್ಯೆ ಮಾಡಲು ಗ್ಯಾಂಗ್ ಸಿದ್ಧತೆ ಮಾಡಿತ್ತು. ಹತ್ಯೆಗಾಗಿ ಒಂದು ವಾರಗಳ ತಯಾರಿ ಮಾಡಿದ್ದ ಹಂತಕರು ಜುಲೈ 21ರ ಬಳಿಕ ಪ್ರತಿದಿನ ಪ್ರವೀಣ್ ಅಂಗಡಿ ಬಳಿ ಬರುತ್ತಿದ್ದರು. ಆದರೆ ಪ್ರವೀಣ್ ಜೊತೆಗೆ ಪತ್ನಿ ನೂತನ ಇರುತ್ತಿದ್ದನ್ನು ಗಮನಿಸಿ ಮರಳುತ್ತಿದ್ದರು. ಜುಲೈ 22, 23, ಹಾಗೂ 24 ರಂದು ಪ್ರವೀಣ್ ಅಂಗಡಿ ಬಳಿ ಬಂದು ಆರೋಪಿ ನೌಫಲ್ ನೋಡಿಕೊಂಡು ಹೋಗಿ ಹಂತಕರಿಗೆ ಅಂಗಡಿ ಬಳಿ ಜನ ಇರುವ ಬಗ್ಗೆ ಮಾಹಿತಿ ನೀಡಿದ್ದ. ಜುಲೈ 26 ರಂದು ಪ್ರವೀಣ್ ಒಬ್ಬರೇ ಅಂಗಡಿಯಲ್ಲಿ ಇರುವುದನ್ನು ಗಮನಿಸಿದ್ದ ಹಂತಕರು ಆ ದಿನ ಹತ್ಯೆ ಮಾಡಿ ಬೈಕ್ ಏರಿ ಪರಾರಿಯಾಗಿದ್ರು. ನಂಬರ್ ಪ್ಲೇಟ್ ಅಸ್ಪಷ್ಟವಾಗಿ ಕಾಣುತ್ತಿದ್ದ ಬೈಕ್ ಏರಿದ್ದ ಇವರು ಬಳಿಕ ಕಾರಿನನಲ್ಲಿ ಕೇರಳಕ್ಕೆ ಪರಾರಿಯಾಗಿದ್ದರು.
ಪ್ರವೀಣ್ ಹತ್ಯೆಗೆ ಮೊದಲೇ ಕೇರಳದಲ್ಲಿ ಎಲ್ಲಿ ತಂಗಬೇಕು ಎಂಬುದನ್ನು ಹಂತಕರು ಪ್ಲಾನ್ ಮಾಡಿದ್ದರು. ಅದರಂತೆ ಕೊಲೆ ಮಾಡಿದ ಬಳಿಕ ಮೊದಲು ಕಾಸರಗೋಡಿನ ಮಾಲಿಕ್ ದಿವಾ ಮಸೀದಿಗೆ ಹೋಗಿದ್ದರು. ಅಲ್ಲಿಂದ ಅವರು ಬೇರೆ ಬೇರೆ ಕಡೆ ಹೋಗಿದ್ದು, ಹಲವರು ನೆರವು ನೀಡಿದ್ದರು. ಬಳಿಕ ತಲಶೇರಿ, ಬಳಿಕ ಕಣ್ಣೂರು, ಮಲ್ಲಪುರಂನಲ್ಲಿರುವ ಅಡಗುತಾಣದಲ್ಲಿ ತಂಗಿದ್ದರು. 15 ದಿನದ ಅಂತರದಲ್ಲಿ ಏಳು ಕಡೆಗಳಲ್ಲಿ ಹಂತಕರು ಅಶ್ರಯ ಪಡೆದಿದ್ದರು. ಹಂತಕರು ನೆಲೆಸಿದ್ದ ಜಾಗ ಪತ್ತೆಯಾಗಿ ಪೊಲೀಸರು ಸ್ಥಳಕ್ಕೆ ಹೋದಾಗ ಆರೋಪಿಗಳು ಸ್ಥಳದಿಂದ ಪರಾರಿಯಾಗುತ್ತಿದ್ದರು.
ಪೊಲೀಸರ ಕೈಗೆ ಸಿಕ್ಕಿಬಿದ್ದ ಹಂತಕರು.? ಎಡಿಜಿಪಿ ಅಲೋಕ್ ಕುಮಾರ್ ಮಾಸ್ಟರ್ ಪ್ಲಾನ್.!!
ಆರೋಪಿಗಳನ್ನು ಬುಡಸಮೇತ ಹೆಡೆಮುರಿ ಕಟ್ಟಲು ಎಡಿಜಿಪಿ ಅಲೋಕ್ ಕುಮಾರ್ ಪ್ಲಾನ್ ಮಾಡಿದ್ದರು. ಮೊದಲು ಹಂತಕರ ಕುಟುಂಬ ಬಳಿಕ ಹಂತಕರ ಆತ್ಮೀಯರ ತೀವ್ರ ವಿಚಾರಣೆ ನಡೆಸಿದ್ದರು. ಈ ವೇಳೆ ಕೃತ್ಯಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಭಾಗವಹಿಸಿದವರ ಎಲ್ಲರ ಆಸ್ತಿ ಮುಟ್ಟುಗೋಲು ಹಾಕುವುದಾಗಿ ಎಚ್ಚರಿಕೆ ನೀಡಿದ್ದರು. ಅಷ್ಟೇ ಅಲ್ಲದೇ ಹಂತಕರಿಗೆ ಆಶ್ರಯ ನೀಡಿದವರಿಗೂ ಖಡಕ್ ಎಚ್ಚರಿಕೆ ನೀಡಿದ್ದರು.
ಹದಿನೈದು ದಿನದಲ್ಲಿ ಐದು ಬಾರಿ ಬೆಳ್ಳಾರೆಗೆ ಭೇಟಿ ನೀಡಿದ್ದ ಎಡಿಜಿಪಿ ಅಲೋಕ್ ಕುಮಾರ್ ಬುಧವಾರವೂ ಆರು ಜಿಲ್ಲೆಯ ಎಸ್ಪಿಗಳ ಜೊತೆ ಸಭೆ ನಡೆಸಿದ್ದರು. ಹಂತಕರಿಗೆ ಆಶ್ರಯ ನೀಡಿದವರಿಗೆ ಅಡಗುತಾಣಗಳಿಗೆ ಸೇನಾ ಮಾದರಿಯಲ್ಲೇ ಕಾರ್ಯಾಚರಣೆ ಮಾಡಲಾಗುವುದು ಎಂದು ಎಚ್ಚರಿಕೆಯ ಸಂದೇಶವನ್ನು ಅಲೋಕ್ ಕುಮಾರ್ ರವಾನಿಸಿದ್ದರು. ಅದರಂತೆ ಇಂದು ಬೆಳಗ್ಗೆ 7 ಗಂಟೆ ಸುಮಾರಿಗೆ ಕೇರಳ-ಕರ್ನಾಟಕ ಗಡಿ ಭಾಗದ ತಲಪ್ಪಾಡಿ ಚೆಕ್ ಪೋಸ್ಟ್ ಬಳಿ ಸುಳ್ಯ ಇನ್ಸ್ಪೆಕ್ಟರ್ ನವೀನ್ ಚಂದ್ರ ಜೋಗಿ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ಕೃತ್ಯಕ್ಕೆ ಎರಡು ದ್ವಿಚಕ್ರ ವಾಹನ ಮತ್ತು ಕಾರು ಸೇರಿ ಒಟ್ಟು ಆರು ವಾಹನ ಬಳಸಿದ್ದು ಅವುಗಳನ್ನು ವಶಕ್ಕೆ ಪಡೆಯಲಾಗಿದೆ.
ಇಂದು ಸುದ್ದಿಗೋಷ್ಟಿಯಲ್ಲಿ ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದೇನು?
ಇನ್ನು ಪ್ರಮುಖ ಆರೋಪಿಗಳ ಬಂಧನದ ಕುರಿತಾಗಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ರಾಜ್ಯ ಕಾನೂನು, ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ಬಹಳ ಒತ್ತಡದ ಮಧ್ಯೆ ನಮ್ಮ ತಂಡ ಆರೋಪಿಗಳನ್ನ ಪತ್ತೆ ಮಾಡಿದ್ದಾರೆ. ಈ ತಂಡವನ್ನು ಸಿಎಂ, ಗೃಹ ಸಚಿವರು, ಡಿಜಿ ಶ್ಲಾಘಿಸಿದ್ದು, ರಿವಾರ್ಡ್ ಕೂಡ ಘೋಷಿಸಿದ್ದಾರೆ. ಅರೋಪಿಗಳಿಗೆ ಪಿಎಫ್ ಐ ಮತ್ತು ಎಸ್ ಡಿಪಿಐ ಲಿಂಕ್ ಇದ್ದು, ಅವರ ಕೈವಾಡ ಇರೋದು ಸಾಬೀತಾಗಿದೆ. ಇದಕ್ಕೆ ಸಂಬಂಧಿಸಿ ನಮಗೆ ಬಹಳಷ್ಟು ಸಾಕ್ಷ್ಯ ಲಭ್ಯವಾಗಿದೆ. ಎಂದರು.
ಚಾರ್ಜ್ ಶೀಟ್ ನಲ್ಲಿ ತನಿಖೆ ಬಳಿಕ ಅವುಗಳನ್ನು ಸೇರಿಸ್ತೇವೆ. ಶಫೀಕ್ ತಂದೆ ಇಬ್ರಾಹಿಂ ಪ್ರವೀಣ್ ಕೋಳಿ ಅಂಗಡಿಯಲ್ಲೇ ಕೆಲಸ ಮಾಡುತ್ತಿದ್ದರು. ಹಾಗಾಗಿ ಶಫೀಕ್ ಗೆ ಪ್ರವೀಣ್ ಬಗ್ಗೆ ಚೆನ್ನಾಗಿ ಗೊತ್ತಿತ್ತು. ಶಫೀಕ್ ನನ್ನ ನಾವು ಮೊದಲೇ ಬಂಧಿಸಿ ವಿಚಾರಣೆ ಮಾಡಿದ್ದೇವೆ ಎಂದರು. ಪ್ರಕರಣದಲ್ಲಿ ಶಫೀಕ್ ನ ಪಾರ್ಟ್ ಗೊತ್ತಾಗಿದೆ, ಉಳಿದವರ ಬಗ್ಗೆ ಸಮಗ್ರ ತನಿಖೆ ಮಾಡ್ತವೆ. ಆಶ್ರಯ ಕೊಟ್ಟವರು ಮತ್ತು ನೆರವು ಕೊಟ್ಟ ಎಲ್ಲರ ಮಾಹಿತಿ ಇದೆ. ಮೂರ್ನಾಲ್ಕು ದಿನದ ಬಳಿಕ ನಾವು ಎನ್ ಐಎಗೆ ಕೊಡ್ತವೆ. ನಿನ್ನೆ ಆಸ್ತಿಮುಟ್ಟುಗೋಲಿನ ಎಚ್ಚರಿಕೆ ಕೊಡಲಾಗಿತ್ತು. ಈಗ ಅವರ ಬಂಧನ ಆಗಿದೆ, ಹಾಗಾಗಿ ಅವರ ಕ್ರಿಮಿನಲ್ ರೆಕಾರ್ಡ್ ನೋಡಿ ಕಾನೂನು ಪ್ರಕಾರ ಕ್ರಮ ಕೈಗೊಳ್ತವೆ ಎಂದಿದ್ದಾರೆ. ಸದ್ಯ ಮೂವರು ಆರೋಪಿಗಳ ಸ್ಥಳ ಮಹಜರು ಹಾಗೂ ಎಲ್ಲಾ ಮುಗಿಸಿ ರಾಷ್ಟ್ರೀಯ ತನಿಖಾ ದಳಕ್ಕೆ ಒಪ್ಪಿಸುತ್ತಾರೆ ಎಂದು ತಿಳಿಸಿದ್ದಾರೆ.