
ಬಂಟ್ವಾಳ: ನಿಲ್ಲಿಸಿದ್ದ ಲಾರಿ ಚಲಿಸಿ ಚಾಲಕ ಮೃತಪಟ್ಟ ಘಟನೆ ಬಂಟ್ವಾಳ ಪುರಸಭಾ ವ್ಯಾಪ್ತಿಯ ಕೈಕಂಬ ಸಮೀಪದ ಪರ್ಲಿಯಾ ಕೊಡಂಗೆ ಎಂಬಲ್ಲಿ ಇಂದು ಮಧ್ಯಾಹ್ನ ವೇಳೆ ನಡೆದಿದೆ.

ಬಾಗಲಕೋಟೆ ಜಿಲ್ಲೆಯ ಜಾವೂರು ನಿವಾಸಿ ಬಾಲಪ್ಪ ಎ.ಜಾವೂರು ಮೃತಪಟ್ಟ ವ್ಯಕ್ತಿ.
ಬಾಲಪ್ಪ ಅವರು ಇಲ್ಲಿನ ರಸ್ತೆ ಕಾಮಗಾರಿ ಗುತ್ತಿಗೆ ಸಂಸ್ಥೆಯೊಂದರಲ್ಲಿ ಕಳೆದ ಕೆಲ ವರ್ಷಗಳಿಂದ ಚಾಲಕನಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

ಈ ರಸ್ತೆ ಕಾಂಕ್ರೀಟ್ ಕಾಮಗಾರಿಯ ವೇಳೆ ಕೊಡಂಗೆ ಎಂಬಲ್ಲಿ ಖಾಲಿ ಜಾಗದಲ್ಲಿ ಜಲ್ಲಿ ರಾಶಿ ಹಾಕಲಾಗಿದ್ದು, ಕಾಮಗಾರಿಯ ಬಳಿಕ ಅಲ್ಲಿ ಉಳಿದ ಜಲ್ಲಿ ಕಲ್ಲುಗಳನ್ನು ಬೇರೆ ಕಾಮಗಾರಿಯ ಪ್ರದೇಶಕ್ಕೆ ಕೊಂಡು ಹೋಗುವ ಉದ್ದೇಶದಿಂದ ಬಾಲಪ್ಪ ರವರು ಲಾರಿ ಯನ್ನು ಜಲ್ಲಿ ಲೋಡ್ ಮಾಡಲು ಕೊಡಂಗೆಯಲ್ಲಿ ನಿಲ್ಲಿಸಿದ್ದರು.
ಲಾರಿ ನಿಲ್ಲಿಸಿ ಅಲ್ಲೇ ಪಕ್ಕ ದಲ್ಲಿ ಮೊಬೈಲ್ ಫೋನ್ ಸಂಭಾಷಣೆಯಲ್ಲಿ ತೊಡಗಿದ್ದ ಬಾಲಪ್ಪ ಅವರಿಗೆ ಲಾರಿ ನಿಧಾನವಾಗಿ ಮುಂದೆ ಚಲಿಸುತ್ತಿರುವ ಬಗ್ಗೆ ಜಲ್ಲಿ ಲೋಡ್ ಮಾಡುವ ಜೆಸಿಬಿ ಚಾಲಕ ಜೋರಾಗಿ ಹೇಳಿದಾಗ ತನ್ನಿಂದ ತಾನೇ ಚಲಿಸುವ ಲಾರಿಯನ್ನು ತಡೆಯಲು ಚಕ್ರದಡಿ ಕಲ್ಲು ಇಡುವ ಪ್ರಯತ್ನಕ್ಕೆ ಮುಂದಾದ ವೇಳೆ ಈ ಘಟನೆ ಸಂಭವಿಸಿದೆ ಎಂದು ಪೋಲೀಸರು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಬಂಟ್ವಾಳ ನಗರ ಠಾಣಾ ಎಸ್. ಐ.ಅವಿನಾಶ್ ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.











