ಮಂಗಳೂರು: ಫ್ಯಾಕ್ಟರಿಯೊಂದರಲ್ಲಿ ವಿಷಾನಿಲ ಸೋರಿಕೆಯಾಗಿ ಮೂವರು ಮೃತಪಟ್ಟ ಮತ್ತು ಹಲವು ಮಂದಿ ಅಸ್ವಸ್ಥಗೊಂಡ ಘಟನೆ ಮಂಗಳೂರಿನ ಎಂಎಸ್ಇಝಡ್ (ಮಂಗಳೂರು ವಿಶೇಷ ಆರ್ಥಿಕ ವಲಯ)ದಲ್ಲಿ ರವಿವಾರ ರಾತ್ರಿ ನಡೆದಿದೆ.
ಪಶ್ಚಿಮ ಬಂಗಾಲ ರಾಜ್ಯದವರಾದ ಸಮೀರುಲ್ಲಾ ಇಸ್ಲಾಂ, ಉಮರ್ ಫಾರೂಕ್, ನಿಝಾಮುದ್ದೀನ್ ಸಾಬ್ ಮೃತಪಟ್ಟವರು.ದುರ್ಘಟನೆಯೂ ಮೀನಿನ ಪ್ಯಾಕ್ಟರಿಯಲ್ಲಿ ನಡೆದಿದೆ.
ಇನ್ನು ಐವರು ಗಂಭೀರವಾಗಿ ಅಸ್ವಸ್ಥರಾಗಿದ್ದು ಅವರು ಕೂಡ ಪಶ್ಚಿಮ ಬಂಗಾಲ ಮೂಲದವರು ಎಂದು ಹೇಳಲಾಗುತ್ತಿದೆ. ಮಿರಾಜುಲ್ ಇಸ್ಲಾಂ, ಸರಾಫತ್ ಅಲಿ, ಅಝಾನ್ ಅಲಿ, ಕಲೀಮುಲ್ಲಾ ಮತ್ತು ಅಫರ್ ಮಲಿಕ್ ಗಂಭೀರವಾಗಿ ಅಸ್ವಸ್ಥರಾದವರು.
ಇವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ದುರ್ಘಟನೆ ಹೇಗೆ ನಡೆಯಿತು ಎಂಬುದು ನಿಖರವಾಗಿ ತಿಳಿದು ಬಂದಿಲ್ಲ.
ಬಲ್ಲ ಮೂಲಗಳ ಪ್ರಕಾರ, ಎಸ್ ಇಝಡ್ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೀನಿನ ಫ್ಯಾಕ್ಟರಿಯಲ್ಲಿ ರಾತ್ರಿ ವೇಳೆ ಕಾರ್ಮಿಕನೊಬ್ಬ ಮೀನಿನ ತ್ಯಾಜ್ಯದ ಟ್ಯಾಂಕನ್ನು ಶುಚಿಗೊಳಿಸಲು ಕೆಳಗಿಳಿದಿದ್ದಾನೆ. ಈ ವೇಳೆ ಏಕಾಏಕಿ ಅಸ್ವಸ್ಥಗೊಂಡು ಬಿದ್ದಿದ್ದಾನೆ. ಕೂಡಲೇ ಆತನನ್ನು ರಕ್ಷಿಸಲು 8ಮಂದಿ ಕಾರ್ಮಿಕರು ಹೋಗಿದ್ದಾರೆ. ಈ ವೇಳೆ ಅವರು ಕೂಡಾ ಅಸ್ವಸ್ಥಗೊಂಡಿದ್ದಾರೆ ಎಂದು ಹೇಳಲಾಗಿದೆ.
ಕೂಡಲೇ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಲ್ಲಿ 3 ಮೂವರು ಮೃತಪಟ್ಟು 5 ಮಂದಿ ಗಂಭೀರವಾಗಿದ್ದಾರೆ ಎನ್ನಲಾಗಿದೆ.
ಬಜ್ಜೆ ಪೊಲೀಸರು ಈ ಗಂಭೀರ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ








