ಫಿನ್ಟೆಕ್ ವಲಯದ ಚಿಂತನಾ ನಾಯಕತ್ವ ವೇದಿಕೆಯಾದ ಇನ್ಫಿನಿಟಿ ಫೋರಂ ಅನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಡಿಸೆಂಬರ್ 3ನೇ ತಾರೀಕಿನ ಶುಕ್ರವಾರದ ಬೆಳಗ್ಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಿದರು. ತಮ್ಮ ಭಾಷಣದ ವೇಳೆ ಮೊಬೈಲ್ ಪಾವತಿಗಳ ಬೆಳವಣಿಗೆಯನ್ನು ಶ್ಲಾಘಿಸಿದ ಅವರು, ಕಳೆದ ವರ್ಷ ಮೊದಲ ಬಾರಿಗೆ ಎಟಿಎಂನಲ್ಲಿ ಹಣ ವಿಥ್ಡ್ರಾ ಮಾಡುವುದರ ಪ್ರಮಾಣವನ್ನೂ ಮೊಬೈಲ್ ಪಾವತಿ ಮೀರಿದೆ ಎಂದು ಹೇಳಿದರು. “ಯಾವುದೇ ಭೌತಿಕ ಶಾಖೆಗಳಿಲ್ಲದ ಸಂಪೂರ್ಣ ಡಿಜಿಟಲ್ ಬ್ಯಾಂಕ್ಗಳು ಈಗಾಗಲೇ ವಾಸ್ತವದಲ್ಲಿ ಜಾರಿ ಆಗಿವೆ ಮತ್ತು ಒಂದು ದಶಕಕ್ಕಿಂತ ಕಡಿಮೆ ಅವಧಿಯಲ್ಲಿ ಭಾರತವು ಸಾಮಾನ್ಯ ಸ್ಥಳವಾಗಿದ್ದು, ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಲ್ಲಿ ಅಥವಾ ಅದರ ಸುತ್ತಲೂ ಆವಿಷ್ಕಾರದ ವಿಚಾರಕ್ಕೆ ಬಂದಾಗ ಯಾವುದಕ್ಕೂ ಕಡಿಮೆ ಇಲ್ಲ ಎಂಬುದನ್ನು ಜಗತ್ತಿಗೆ ಸಾಬೀತುಪಡಿಸಿದೆ,” ಎಂದು ಅವರು ಹೇಳಿದರು.
GIFT ಸಿಟಿ ಮತ್ತು ಬ್ಲೂಮ್ಬರ್ಗ್ನ ಸಹಯೋಗದೊಂದಿಗೆ ಕೇಂದ್ರ ಸರ್ಕಾರದ ಆಶ್ರಯದಲ್ಲಿ ಅಂತರರಾಷ್ಟ್ರೀಯ ಹಣಕಾಸು ಸೇವಾ ಕೇಂದ್ರಗಳ ಪ್ರಾಧಿಕಾರ (IFSCA) ಆಯೋಜಿಸುತ್ತಿರುವ ಕಾರ್ಯಕ್ರಮದ ಆರಂಭಿಕ ಭಾಷಣದಲ್ಲಿ ಈ ವಿಚಾರ ತಿಳಿಸಿದರು. ಪ್ರಧಾನ ಮಂತ್ರಿಗಳ ಕಚೇರಿ (PMO) ಈ ಹಿಂದೆ ಹೊರಡಿಸಿದ್ದ ಹೇಳಿಕೆಯಲ್ಲಿ, ಇನ್ಫಿನಿಟಿ ಫೋರಮ್ ನೀತಿ, ವ್ಯವಹಾರ ಮತ್ತು ತಂತ್ರಜ್ಞಾನದ ಭಾಗೀದಾರರನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸುತ್ತದೆ ಮತ್ತು ತಂತ್ರಜ್ಞಾನ ಹಾಗೂ ನಾವೀನ್ಯತೆಗಳನ್ನು ಫಿನ್ಟೆಕ್ ಉದ್ಯಮದಿಂದ ಹೇಗೆ ಬಳಕೆಗೆ ತರಬಹುದು ಎಂಬುದನ್ನು ಚರ್ಚಿಸುತ್ತದೆ ಎಂದು ತಿಳಿಸಿತ್ತು.
ಸರ್ಕಾರದ ಪ್ರಮುಖ ಡಿಜಿಟಲ್ ಇಂಡಿಯಾ ಯೋಜನೆಯಡಿ “ಪರಿವರ್ತನೆಯ ಉಪಕ್ರಮಗಳನ್ನು” ಮೋದಿ ತಿಳಿಸಿದರು. “ಆಡಳಿತದಲ್ಲಿ ಅನ್ವಯಿಸಲು ನವೀನ ಫಿನ್ಟೆಕ್ ಸಲ್ಯೂಷನ್ಗಳಿಗೆ ಬಾಗಿಲು ತೆರೆದಿದೆ,” ಎಂದರು. “ಈಗ ಈ ಫಿನ್ಟೆಕ್ ಉಪಕ್ರಮಗಳನ್ನು ಫಿನ್ಟೆಕ್ ಕ್ರಾಂತಿಯಾಗಿ ಪರಿವರ್ತಿಸುವ ಸಮಯ ಬಂದಿದೆ. ದೇಶದ ಪ್ರತಿಯೊಬ್ಬ ನಾಗರಿಕರ ಆರ್ಥಿಕ ಸಬಲೀಕರಣವನ್ನು ಸಾಧಿಸಲು ಸಹಾಯ ಮಾಡುವ ಕ್ರಾಂತಿ ಇದು. ನಮ್ಮ ಅನುಭವಗಳು ಮತ್ತು ಪರಿಣತಿಯನ್ನು ಪ್ರಪಂಚದೊಂದಿಗೆ ಹಂಚಿಕೊಳ್ಳುವುದನ್ನು ಮತ್ತು ಅವರಿಂದ ಕಲಿಯುವುದನ್ನು ನಾವು ನಂಬುತ್ತೇವೆ. ನಮ್ಮ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಪರಿಹಾರಗಳು ಪ್ರಪಂಚದಾದ್ಯಂತದ ನಾಗರಿಕರ ಜೀವನವನ್ನು ಸುಧಾರಿಸಬಹುದು,” ಎಂದು ಅವರು ಹೇಳಿದರು.
ಎರಡು ದಿನಗಳ ಈ ಕಾರ್ಯಕ್ರಮದಲ್ಲಿ 70 ದೇಶಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಫೋರಂನ ಪ್ರಮುಖ ಭಾಷಣಕಾರರಲ್ಲಿ ಮಲೇಷ್ಯಾದ ಹಣಕಾಸು ಸಚಿವ ತೆಂಗು ಜಫ್ರುಲ್ ಅಜೀಜ್, ಇಂಡೋನೇಷ್ಯಾದ ಹಣಕಾಸು ಸಚಿವರಾದ ಮುಲ್ಯಾನಿ ಇಂದ್ರಾವತಿ, ಸೃಜನಾತ್ಮಕ ಆರ್ಥಿಕತೆ ಸಚಿವರಾದ ಇಂಡೋನೇಷ್ಯಾ ಸ್ಯಾಂಡಿಯಾಗ ಎಸ್. ಯುನೊ, ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ, ಸಾಫ್ಟ್ಬ್ಯಾಂಕ್ ಗ್ರೂಪ್ ಕಾರ್ಪೊರೇಷನ್ ಅಧ್ಯಕ್ಷ ಮತ್ತು ಸಿಇಒ ಮಸಯೋಶಿ ಸನ್, IBM ಕಾರ್ಪೊರೇಷನ್ ಅಧ್ಯಕ್ಷ ಮತ್ತು ಸಿಇಒ ಅರವಿಂದ್ ಕೃಷ್ಣ, ಕೊಟಕ್ ಮಹೀಂದ್ರಾ ಬ್ಯಾಂಕ್ ಲಿಮಿಟೆಡ್ ಎಂ.ಡಿ. ಮತ್ತು ಸಿಇಒ ಉದಯ್ ಕೊಟಕ್ ಮತ್ತಿತರರು ಇತರರಿದ್ದಾರೆ.