ಪ್ರವಾದಿ ಮೊಹಮ್ಮದ್ ಪೈಗಂಬರ್ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಬೆಂಬಲಿಸಿ ಪೋಸ್ಟ್ ಹಾಕಿದ್ದಕ್ಕೆ ರಾಜಸ್ಥಾನದ ಉದಯಪುರದಲ್ಲಿ ಅಂಗಡಿ ಮಾಲೀಕ ಕನ್ಹಯ್ಯಾ ಲಾಲ್ರ ಶಿರಚ್ಛೇದನ ಮಾಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ರಾಜಸಮಂದ್ನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳಿಬ್ಬರನ್ನು ಉದಯಪುರ ಪೊಲೀಸರು ಬಂಧಿಸಿದ್ದು ಮೊಬೈಲ್ ಸೀಜ್ ಮಾಡಲಾಗಿದೆ.
ಇನ್ನು ರಾಜಸ್ಥಾನದ ಉದಯಪುರದಲ್ಲಿ 24 ಗಂಟೆ ಕಾಲ ಇಂಟರ್ನೆಟ್ ಸ್ಥಗಿತಗೊಳಿಸಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಇಂಟರ್ನೆಟ್ ಬಂದ್ ಮಾಡುವುದಾಗಿ ವಿಭಾಗೀಯ ಆಯುಕ್ತ ರಾಜೇಂದ್ರ ಭಟ್ ಮಾಹಿತಿ ನೀಡಿದ್ದಾರೆ. ಹಾಗೂ ಉದಯಪುರ ನಗರದಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದೆ. ಹತ್ಯೆಯಾದ ಸ್ಥಳದಲ್ಲಿ ಪೊಲೀಸ್ ಬಿಗಿ ಭದ್ರತೆ ಕೈಗೊಂಡಿದೆ.
ಘಟನೆ ಹಿನ್ನೆಲೆ: ಕನ್ನಯ್ಯಲಾಲ್ ಎಂಬ ಟೈಲರ್ ಅಂಗಡಿ ನಡೆಸುತ್ತಿದ್ದವರನ್ನು ರಫೀಕ್ ಮೊಹಮ್ಮದ್ ಮತ್ತು ಅಬ್ದುಲ್ ಜಬ್ಬಾರ್ ಎಂಬ ದುಷ್ಕರ್ಮಿಗಳು ಹಾಡಹಗಲೇ ಕತ್ತು ಕತ್ತರಿಸಿ ಹತ್ಯೆ ಮಾಡಿದ್ದಾರೆ. ಬಿಜೆಪಿಯ ಮಾಜಿ ವಕ್ತಾರೆ ನೂಪುರ ಶರ್ಮಾ ಹೇಳಿಕೆಯನ್ನ ಬೆಂಬಲಿಸಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಕ್ಕೆ ಪ್ರತೀಕಾರವಾಗಿ ಈ ಹತ್ಯೆ ನಡೆದಿದೆ. ಕನ್ನಯ್ಯಲಾಲ್ ಅವರ ಎಂಟು ವರ್ಷದ ಮಗ ತಂದೆಯ ಮೊಬೈಲ್ ನಿಂದ ನೂಪುರ್ ಶರ್ಮಾ ಹೇಳಿಕೆ ಬೆಂಬಲಿಸಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದ. ಇದಾದ ಬಳಿಕ ಧನ್ಮಂಡಿ ಪೋಲೀಸರು ಕನ್ನಯ್ಯಲಾಲ್ ರನ್ನು ಬಂಧಿಸಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದರು. ಆದರೇ, ಕನ್ನಯ್ಯಲಾಲ್ ಗೆ ಜೀವ ಬೆದರಿಕೆ ಕರೆಗಳು ಬರುತ್ತಲೇ ಇದ್ದವು. ಇದರಿಂದ ಜೀವ ಭಯಕ್ಕೊಳಗಾದ ಕನ್ನಯ್ಯಲಾಲ್, ಪೊಲೀಸ್ ರಕ್ಷಣೆ ನೀಡುವಂತೆ ಮನವಿ ಮಾಡಿದ್ದರು. ಆದರೇ, ಪೊಲೀಸರು ಕನ್ನಯ್ಯಲಾಲ್ ಮನವಿಯನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಕನ್ನಯ್ಯಲಾಲ್ ಗೆ ಪೊಲೀಸ್ ರಕ್ಷಣೆ ನೀಡಿರಲಿಲ್ಲ. ಇಂದು ಪೊಲೀಸ್ ಠಾಣೆಯಿಂದ ಬಂದ ಕನ್ನಯ್ಯಲಾಲ್ ರನ್ನ ಹತ್ಯೆ ಮಾಡಿದ್ದಾರೆ. ರಸ್ತೆಯಲ್ಲಿ ಕನ್ನಯ್ಯಲಾಲ್ ಶವ ಬಿದ್ದಿತ್ತು. ಹತ್ಯೆ ಘಟನೆ ಮಾಹಿತಿ ತಿಳಿದ ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಶವವನ್ನು ಎಂ.ಬಿ. ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ. ಹತ್ಯೆಯ ಸ್ಥಳದಲ್ಲಿ ರಕ್ತದ ಕೋಡಿಯೇ ಹರಿದಿದೆ.