ಕಾಪು: ಮನೆಯೊಂದಕ್ಕೆ ಕನ್ನ ಹಾಕಿದ ಕಳ್ಳರು ನಗ, ನಗದು, ಬಟ್ಟೆ, ಪಾತ್ರೆ ಸಹಿತ ಅಕ್ಕಿಯನ್ನೂ ಕದ್ದೊಯ್ದ ಘಟನೆ ತಾಲೂಕಿನ ತೆಂಕ ಎರ್ಮಾಳು ಜಂಕ್ಷನ್ ಬಳಿಯ ಸಂಭವಿಸಿದೆ.
ತೆಂಕ ಎರ್ಮಾಳುವಿನ ಆಯೆಷಾ ಇಬ್ರಾಹಿಂ ಎಂಬುವವರ ಬಾಡಿಗೆ ರೂಮ್ ನಲ್ಲಿ ಹಾವೇರಿ ಮೂಲದ ಮಾಸಪ್ಪ ಎಂಬವರ ಕುಟುಂಬ ವಾಸವಾಗಿದ್ದು, ದಸರಾ ಹಬ್ಬಕ್ಕಾಗಿ ಕಳೆದ ಹದಿನೈದು ದಿನಗಳ ಹಿಂದೆ ರೂಮ್ ಗೆ ಬೀಗ ಹಾಕಿ ಊರಿಗೆ ತೆರಳಿದ್ದರು. ಇಂದು ಭಾನುವಾರ ಮುಂಜಾನೆ 5. 30ರ ಸುಮಾರಿಗೆ ಊರಿನಿಂದ ವಾಪಾಸ್ಸು ಮನೆಗೆ ಬಂದಾಗ, ಮಂದ ಬೆಳಕಿನಲ್ಲಿ ಮನೆ ಮುಂದೆ ವ್ಯಕ್ತಿಯೊಬ್ಬರು ನಿಂತಿದ್ದು, ಇವರನ್ನು ಕಂಡು ತಾನು ತಂದಿದ್ದ ಸ್ಕೂಟರ್ ಬಿಟ್ಟು ಓಡಿ ಹೋಗಿದ್ದಾನೆ.
ರೂಮ್ನ ಬಾಗಿಲು ತೆರೆದುಕೊಂಡಿದ್ದು ಒಳಗೆ ಹೋಗಿ ಪರಿಶೀಲನೆ ನಡೆಸಿದಾಗ ಮಕ್ಕಳ ಆಭರಣ ಸಹಿತ ಇಪ್ಪತ್ತು ಸಾವಿರ ನಗದು, ಹೊಸ ಪಾತ್ರೆಗಳು, ಸುಮಾರು ಅರವತ್ತು ಕೆ.ಜಿ ಯಷ್ಟಿದ್ದ ಅಕ್ಕಿ ನಾಪತ್ತೆಯಾಗಿದೆ.
ಈ ಬಗ್ಗೆ ಪಡುಬಿದ್ರಿ ಪೊಲೀಸರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಬಂದ ಠಾಣಾ ಕ್ರೈಂ ಎಸ್ಸೈ ಪ್ರಕಾಶ್ ತಂಡ ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳಕ್ಕೆ ಕಾಪು ವೃತ್ತ ನಿರೀಕ್ಷಕ ಕೆ ಸಿ ಪೂವಯ್ಯ ಆಗಮಿಸಿದ್ದು, ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಆಗಮಿಸಿ ತನಿಖೆ ನಡೆಸಿದ್ದಾರೆ. ಪೊಲೀಸರಿಗೆ ಮಹತ್ವದ ಸುಳಿವು ಲಭ್ಯವಾಗಿದೆ ಎನ್ನಲಾಗಿದ್ದು, ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.