ಕುಂದಾಪುರ: ಸಗಣಿ ನೀರಿನ ಹೊಂಡಕ್ಕೆ ಬಿದ್ದು ಎರಡೂವರೆ ವರ್ಷದ ಮಗುವೊಂದು ಸಾವನ್ನಪ್ಪಿದ ದಾರುಣ ಘಟನೆ ಕುಂದಾಪುರದ ಮೊಳಹಳ್ಳಿ ಬಳಿ ಮಂಗಳವಾರ ನಡೆದಿದೆ. ಮೃತ ಮಗು ಬಿಹಾರ ಮೂಲದ ಲಾಲ್ ಬಿಹಾರಿ ಹಾಗೂ ರಾಮ್ ದೇಹನ್ ಸಿಂಗ್ ದಂಪತಿಗಳ ಪುತ್ರ ಅನುರಾಜ್ (2.6) ಎಂದು ಗುರುತಿಸಲಾಗಿದೆ.
ಬಿಹಾರ ಮೂಲದ ಲಾಲ್ ಬಿಹಾರಿ ಹಾಗೂ ರಾಮ್ ದೇಹನ್ ಸಿಂಗ್ ದಂಪತಿಗಳು ಕುಂದಾಪುರದ ಮೊಳಹಳ್ಳಿಯ ಕೈಲ್ಕೇರಿಯ ನಿವಾಸಿ ಚೈತ್ರ ವಿ. ಅಡಪ ಎಂಬವರ ಮನೆ ಬಳಿ ವಾಸವಾಗಿದ್ದು, ಇವರಿಗೆ ಅನುಷ್ಕಾ (4) ಹಾಗೂ ಅನುರಾಜ್ (2.6) ಮಕ್ಕಳಿದ್ದರು.
ಅಡಪ ಅವರ ಬಳಿ ಹಟ್ಟಿಯಲ್ಲಿ ಸುಮಾರು 30 ದನಗಳಿದ್ದು ,ಮೃತ ಮಗುವಿನ ತಾಯಿ ದನದ ಹಟ್ಟಿ ನಿತ್ಯ ಸ್ವಚ್ಚಗೊಳಿಸುತ್ತಿದ್ದರು. ಹಟ್ಟಿಯ ನೀರು ಅಲ್ಲೇ ಇದ್ದ ಹೊಂಡದಲ್ಲಿ ತುಂಬುತ್ತಿದ್ದು , ಘಟನೆ ನಡೆದ ದಿನದಂದು ವಿದ್ಯುತ್ ಇಲ್ಲದ ಕಾರಣ ಹೊಂಡದ ನೀರು ಖಾಲಿ ಮಾಡಿರಲಿಲ್ಲ. ಅದೇ ದಿನ ಸಂಜೆ 4:45ಕ್ಕೆ ಕೆಲಸ ಮುಗಿಸಿ ಮನೆಗೆ ತೆರಳಿದ ತಾಯಿ ಲಾಲ್ ಬಿಹಾರಿ ಮಕ್ಕಳ ಜೊತೆ ಸಂಜೆ ಚಹಾ ಸೇವಿಸಿದ್ದಾರೆ.
ಆದರೆ 5 ಗಂಟೆಗೆ ವೇಳೆ ಮಗ ಅನುರಾಜ್ ನ ಕಾಣಿಸದೆ ಇದ್ದಾಗ ಹುಡುಕಾಟ ನಡೆಸಿದ್ದು, ಈ ವೇಳೆ ಮಗುವಿನ ಚಪ್ಪಲ್ ಹಟ್ಟಿಯ ನೀರು ಹೋಗುವ ಹೊಂಡದ ಬಳಿ ಇದ್ದು, ಸಂಶಯಗೊಂಡು ಸಗಣಿ ನೀರಿನ ಹೊಂಡಕ್ಕೆ ಇಳಿದು ಹುಡುಕಾಡಿದಾಗ ಮಗು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕೂಡಲೇ ಮಗುವನ್ನು ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದು ವೈದ್ಯಾಧಿಕಾರಿ ಮಗು ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಘಟನೆ ಬಗ್ಗೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.