ನವದೆಹಲಿ: ಗುಪ್ತಚರ ಸಂಸ್ಥೆ, ಭದ್ರತಾ ಪಡೆಗಳು ಅಥವಾ ಆಯಕಟ್ಟಿನ ಸ್ಥಾನಗಳಲ್ಲಿದ್ದು ನಿವೃತ್ತರಾದ ಅಧಿಕಾರಿಗಳು ಇನ್ನು ಮುಂದೆ ತಮಗೆ ತೋಚಿದ ‘ಎಲ್ಲವನ್ನೂ ತಿಳಿಸುವ’ ಪುಸ್ತಕಗಳನ್ನು (tell-all books) ಕೇಂದ್ರ ಸರ್ಕಾರದ ಅನುಮತಿಯಿಲ್ಲದೆ ಪ್ರಕಟಿಸುವ ಹಾಗಿಲ್ಲ. ಹಾಗಂತ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹೊಸ ನಿಯಮ ಜಾರಿಗೆ ತಂದಿದೆ.
ಬೇಹುಗಾರಿಕೆ ಸಂಸ್ಥೆ, ಭದ್ರತಾ ಪಡೆಗಳು ಅಥವಾ ಆಯಕಟ್ಟಿನ ಸ್ಥಾನಗಳನ್ನು ನಿಭಾಯಿಸಿದ ನಂತರ, ನಿವೃತ್ತರಾಗುವ ನಾಗರಿಕ ಸೇವಾ ಅಧಿಕಾರಿಗಳು ಇನ್ಮುಂದೆ ಇಲಾಖೆಯ ಸಂಬಂಧ ಪುಸ್ತಕ ಬರೆಯುವಂತಿಲ್ಲ. ಪುಸ್ತಕ ಬರೆಯಲು ಇಲಾಖೆ ಮುಖ್ಯಸ್ಥರ ಒಪ್ಪಿಗೆ ಪಡೆಯುವುದು ಕಡ್ಡಾಯ. ಇಲಾಖೆ ಮುಖ್ಯಸ್ಥರ ಒಪ್ಪಿಗೆ ಇಲ್ಲದೆ ಬರೆದರೆ ಪಿಂಚಣಿಗೆ ತಡೆ ಬೀಳುತ್ತದೆ ಎಂದು ಕೇಂದ್ರ ಸರ್ಕಾರ ಹೊಸ ಆದೇಶವನ್ನು ಹೊರಡಿಸಿದೆ.
2008 ರಲ್ಲಿ ಯುಪಿಎ ನೇತೃತ್ವದ ಕೇಂದ್ರ ಸರ್ಕಾರ (UPA government) ಇಂತಹ ಆದೇಶವನ್ನು ಜಾರಿಗೆ ತಂದಿತ್ತು. ಆದರೆ ಅದು ಭಾರತದ ಸಾರ್ವಭೌಮತ್ವ ಮತ್ತು ಐಕ್ಯತೆಗೆ ಧಕ್ಕೆ ತರುವಂತಹ ಯಾವುದೇ ಪುಸ್ತಕ, ಲೇಖನಗಳನ್ನು ಪ್ರಕಟಿಸುವಂತಿಲ್ಲ ಎಂಬುದಕ್ಕಷ್ಟೇ ಸೀಮಿತವಾಗಿತ್ತು. ಈಗ ಸೂಕ್ಷ್ಮ ವಿಷಯಗಳಿಗೂ ಅನ್ವಯವಾಗುವಂತೆ ನಿವೃತ್ತ ಅಧಿಕಾರಿಗಳಿಂದ ಇಲಾಖೆಗಳ ಒಳಸುಳಿಗಳನ್ನು ಹರಿಯಬಿಡುವ ಪ್ರಯತ್ನಕ್ಕೆ ಕಡಿವಾಣ ಹಾಕುವಂತಹ ತಿದ್ದುಪಡಿ ಕಾನೂನನ್ನು ಜಾರಿಗೆ ತರಲಾಗಿದೆ. ಹಾಗಾಗಿ ಈಗ ನಿವೃತ್ತ ಅಧಿಕಾರಿಗಳು ಇಲಾಖೆಗಳ ಬಗ್ಗೆ ಏನಾದರೂ ಬರೆಯಬೇಕೆಂದ್ರೆ ಹೆಚ್ಚಿನ ಜಾಗ್ರತೆ ವಹಿಸುವುದು ಅನಿವಾರ್ಯವಾಗಿದೆ.
ಇದೇ ಮೊದಲ ಬಾರಿಗೆ ಇಂತಹ ‘ಸೂಕ್ಷ್ಮ ನಿರ್ಧಾರ’ ಈ ಸಂಬಂಧ ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು (Department of Personnel and Training -DoPT) ಕೇಂದ್ರ ನಾಗರಿಕ ಸೇವೆಗಳ (ಪೆನ್ಶನ್) ರೂಲ್ಸ್ಗೆ (Central Civil Services Pension Rules, 1972) ತಿದ್ದುಪಡಿ ತಂದಿದೆ.
ನಿವೃತ್ತ ಅಧಿಕಾರಿಗಳು ಕೆಲ ನಿಬಂಧನೆಗಳಿಗೆ ಒಳಪಟ್ಟು ಪುಸ್ತಕ ಪ್ರಕಟಿಸಬಹುದು. ಆದರೆ ಅದು ಸೂಕ್ಷ್ಮ ಮಾಹಿತಿಯಿಂದ ಕೂಡಿದೆಯಾ ಅಥವಾ ಇಲ್ಲವಾ ಎಂಬುದನ್ನು ಆಯಾ ಇಲಾಖೆಗಳ ಮುಖ್ಯಸ್ಥರು ನಿರ್ಧರಿಸುತ್ತಾರೆ. ಅದರಂತೆ ನಿವೃತ್ತ ಸಿಬ್ಬಂದಿ ನಡೆದುಕೊಳ್ಳಬೇಕಾಗುತ್ತದೆ.
ಇದೇ ಮೊದಲ ಬಾರಿಗೆ ಇಂತಹ ‘ಸೂಕ್ಷ್ಮ ನಿರ್ಧಾರ’ವನ್ನು ಕೇಂದ್ರ ಸರ್ಕಾರ ತೆಗೆದುಕೊಂಡಿದೆಯಾದರೂ ಈ ಬಗ್ಗೆ ಈ ಹಿಂದೆಯೂ ಪ್ರಯತ್ನಗಳು ನಡೆದಿದ್ದವು ಎಂಬುದು ಗಮನಾರ್ಹ.