ಚಿಕ್ಕಮಗಳೂರು : ಗೋವುಗಳನ್ನು ಕಡಿದು ಅಕ್ರಮವಾಗಿ ಗೋ ಮಾಂಸ ಬೇರ್ಪಡಿಸುವಾಗ ದಾಳಿ ಮಾಡಿದ ಪೋಲಿಸರ ಮೇಲೆ ಹಲ್ಲೆಗೆ ಮುಂದಾಗಿ ಕತ್ತಲಲ್ಲಿ ನದಿಗೆ ಹಾರಿ ಗೋಕಳ್ಳರು ತಪ್ಪಿಸಿಕೊಂಡ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಹೇರೂರು ಗ್ರಾಮದಲ್ಲಿ ನಡೆದಿದೆ.
ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಹೇರೂರು-ಸಿರೂರು ಗ್ರಾಮದ ರಾಮಗೌಡ ಎಂಬುವರ ಕಾಫಿ ತೋಟದ ಲೈನ್ನಲ್ಲಿ ಅಪರಿಚಿತರು ಅಕ್ರಮವಾಗಿ ಗೋವುಗಳನ್ನು ಕಡಿದು ಮಾಂಸ ಬೇರ್ಪಡಿಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಬಾಳೆಹೊನ್ನೂರು ಪೊಲೀಸರು ಮಾರುವೇಷದಲ್ಲಿ ದಾಳಿ ನಡೆಸಿದ್ದಾರೆ.
ಪೊಲೀಸರಿಗೆ ಸಿಕ್ಕ ಖಚಿತ ಮಾಹಿತಿ ಮೇರೆಗೆ ಮಾರುವೇಷದಲ್ಲಿ ದಾಳಿ ನಡೆಸಿದ ಸಮಯದಲ್ಲಿ ಸುಮಾರು ಒಂದು ಕ್ವಿಂಟಾಲ್ ಗೋ ಮಾಂಸವನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸರ ದಾಳಿ ವೇಳೆ ಎಸ್ಟೇಟ್ನ ಕೂಲಿ ಕಾರ್ಮಿಕರ ಲೈನ್ನ ಮನೆಯೊಂದರಲ್ಲಿ ಐದು ಜನ ಹಸುವನ್ನು ಕಡಿಯುತ್ತಿದ್ದು, ಈ ವೇಳೆಯಲ್ಲಿ ಪೊಲೀಸರನ್ನು ಕಂಡ ಕೂಡಲೇ ಮಾಂಸ ಕಡಿಯುತ್ತಿದ್ದವರು ಸ್ಥಳದಿಂದ ಪರಾರಿಯಾಗಿದ್ದಾರೆ. ಪರಾರಿಯಾಗುವ ವೇಳೆ ಪೊಲೀಸರ ಜೊತೆಗೆ ಮಾತಿನ ಚಕಮಕಿ ನಡೆಸಿ ಪೊಲೀಸರ ಮೇಲೆ ದಾಳಿ ಮುಂದಾಗಿದ್ದಾರೆ. ಅದರಲ್ಲಿ ಕೆಲವರು ಕತ್ತಲಲ್ಲಿ ನದಿಗೆ ಹಾರಿ ತಪ್ಪಿಸಿಕೊಂಡಿದ್ದಾರೆ. ಸ್ಥಳದಲ್ಲಿ ಒಂದು ಕ್ವಿಂಟಾಲ್ ಗೋ ಮಾಂಸ, ದನ ಕತ್ತರಿಸಿದ ಒಂದು ಕಾಲು ಪತ್ತೆಯಾಗಿದೆ.
ಆರೋಪಿಗಳು ಮಾಂಸ ಮಾರಾಟದ ಉದ್ದೇಶದಿಂದ ದನಗಳನ್ನು ಹಲವೆಡೆಗಳಿಂದ ಕಳವು ಮಾಡಿಕೊಂಡು ಬಂದು ಮಾಂಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಪರಾರಿಯಾದ ಆರೋಪಿಗಳ ಪತ್ತೆಗೆ ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ. ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿ ಪರಾರಿಯಾದ ಗೋಕಳ್ಳರು ಕಾಫಿ ತೋಟಕ್ಕೆ ಕೆಲಸಕ್ಕೆ ಬಂದಿದ್ದ ಅಕ್ರಮ ಬಾಂಗ್ಲಾ ನಿವಾಸಿಗಳು ಎನ್ನುವ ಆರೋಪ ಕೇಳಿಬಂದಿದೆ.