ಹೈದರಾಬಾದ್: ರಾಮಾನುಜಾಚಾರ್ಯರ ಜ್ಞಾನ ಇಡೀ ವಿಶ್ವಕ್ಕೇ ವ್ಯಾಪಿಸಲಿ. ಯುಗಯುಗಗಳವರೆಗೆ ನಾವು ಮಾನವತ್ವಕ್ಕೆ ದಿಕ್ಕನ್ನು ತೋರಿಸಿದ್ದೇವೆ. ಮಾನವೀಯತೆ ಶಕ್ತಿಗೆ ಮೂರ್ತ ರೂಪ ನೀಡಲಾಗಿದೆ. ಪ್ರತಿಮೆ ಮುಂದಿನ ಪೀಳಿಗೆಗೆ ಮಾತ್ರ ಪ್ರೇರಣೆ ನೀಡಲ್ಲ. ಭಾರತದ ಪುರಾತನ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಈ ಕಾರ್ಯ ಕೈಗೊಂಡ ರಾಮಾನುಜಾಚಾರ್ಯರ ಅನುಯಾಯಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಹೈದರಾಬಾದ್ನ ಹೊರವಲಯದಲ್ಲಿ ಇರುವ ಮುಂಚಿತ್ತಾಲ್ನಲ್ಲಿ ರಾಮಾನುಜಾಚಾರ್ಯರ 216 ಅಡಿ ಎತ್ತರದ ಬೃಹತ್ ಪಂಚಲೋಹದ ಪ್ರತಿಮೆ ಅನಾವರಣಗೊಳಿಸಿ ಅವರು ಮಾತನಾಡಿದ್ದಾರೆ.
ವಸಂತಪಂಚಮಿ ದಿನ ಪ್ರತಿಮೆ ಅನಾವರಣಗೊಳಿಸಿದ್ದಕ್ಕೆ ಸಂತೋಷವಾಗಿದೆ. ಶಾರದಾ ಮಾತೆ ಕೃಪೆಯಲ್ಲಿ ರಾಮಾನುಜರ ಪ್ರತಿಮೆ ಲೋಕಾರ್ಪಣೆ ಮಾಡಲಾಗಿದೆ. ಜಗದ್ಗುರು ಶ್ರೀ ರಾಮಾನುಜಾಚಾರ್ಯರು ವಿಶ್ವಕ್ಕೇ ಜ್ಞಾನ ಪಥ. ಗುರು ಮಾಧ್ಯಮ ಮೂಲಕವೇ ನಮಗೆಲ್ಲಾ ಜ್ಞಾನ ಪ್ರಸರಣ ಆಗುತ್ತದೆ. ಭವ್ಯವಾದ ವಿಶಾಲ ಮೂರ್ತಿಯು ಮಾನವ ಸಂಕುಲಕ್ಕೇ ಪ್ರೇರಣೆ ಎಂದು ಪ್ರತಿಮೆ ಲೋಕಾರ್ಪಣೆಗೊಳಿಸಿದ ಬಳಿಕ ಪ್ರಧಾನಿ ಮೋದಿ ತಿಳಿಸಿದ್ದಾರೆ.
ರಾಮಾನುಜಾಚಾರ್ಯರು ತಮ್ಮ ಇಡೀ ಜೀವನವನ್ನು ಕರ್ಮಕ್ಕಾಗಿ ಸಮರ್ಪಿಸಿದರು. ರಾಮಾನುಜರ ಮಂದಿರಗಳಲ್ಲಿ ತಿರುಪ್ಪಾವೈ ಇಲ್ಲದೆ ಏನೂ ನಡೆಯಲ್ಲ. ಪ್ರಗತಿಶೀಲತೆ, ಪ್ರಾಚೀನತೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲ. ರಾಮಾನುಜರು ದಲಿತರು, ಹಿಂದುಳಿದವರನ್ನು ಆಲಿಂಗನ ಮಾಡಿದರು. ಜಾತಿಯಿಂದಲ್ಲ ಗುಣದಿಂದ ಕಲ್ಯಾಣವಾಗುತ್ತೆ. ರಾಮ ತನ್ನ ಕೈಯಿಂದ ಜಟಾಯು ಅಂತ್ಯಸಂಸ್ಕಾರ ಮಾಡಿದ. ಹೀಗಾಗಿ ಭೇದಭಾವ ಏಕೆ ಎಂದು ಹೇಳಿದರು. ಸಮಾಜದ ಅನಿಷ್ಟಗಳ ವಿರುದ್ಧ ತಮ್ಮ ಪೂರ್ತಿ ಶಕ್ತಿ ವಿನಿಯೋಗಿಸಿ ಹೋರಾಟ ಮಾಡಿದರು ಎಂದು ರಾಮಾನುಜಾಚಾರ್ಯರ ಬಗ್ಗೆ ಮಾತನಾಡಿದ್ದಾರೆ.
ರಾಮಾನುಜಾಚಾರ್ಯರು ಸಂಸ್ಕೃತ ಗ್ರಂಥ ರಚನೆಯ ಜತೆಯಲ್ಲಿ ತಮಿಳು ಭಾಷೆಗೆ ಮಹತ್ವ ನೀಡಿದ್ದರು. ಸಾಮಾಜ ಸುಧಾರಣಾಕಾರರ ಬಗ್ಗೆ ಸಮಾಜದಲ್ಲಿ ಚರ್ಚೆ ಆಗುತ್ತೆ. ಪ್ರಾಚೀನತೆ, ಪ್ರಗತಿಶೀಲರು ಯಾರೆಂದು ಸಂತರಲ್ಲಿ ಗೊತ್ತಾಗುತ್ತೆ. ಪ್ರಗತಿಶೀಲತೆಯಿಂದ ಹೆಸರಾದವರೇ ಶ್ರೀರಾಮಾನುಜಾಚಾರ್ಯ. ಸಮಾಜದ ಸುಧಾರಣೆಗೆ ಶ್ರಮಿಸಿದವರು ರಾಮಾನುಜಾಚಾರ್ಯ. ದಲಿತರ ಉದ್ಧಾರಕ್ಕಾಗಿ ರಾಮಾನುಜಾಚಾರ್ಯರ ಪರಿಶ್ರಮ ಇದೆ. ಜಾತಿ ವ್ಯವಸ್ಥೆ ತೊಡೆದುಹಾಕಿದ ಸಂತರು ರಾಮಾನುಜಾಚಾರ್ಯ ಎಂದು ನರೇಂದ್ರ ಮೋದಿ ತಿಳಿಸಿದ್ದಾರೆ.
ಡಾ.ಬಿ.ಆರ್.ಅಂಬೇಡ್ಕರ್ ಕೂಡ ರಾಮಾನುಜರನ್ನು ಪ್ರಶಂಸಿಸುತ್ತಿದ್ದರು. ಎಲ್ಲರಿಗೂ ಸಾಮಾಜಿಕ ನ್ಯಾಯ ಸಿಗಬೇಕೆಂದು ಪ್ರತಿಪಾದಿಸಿದ್ದರು. ಕನಕದಾಸರು ಕನ್ನಡದಲ್ಲಿ ರಾಮಾನುಜರನ್ನು ಪ್ರಶಂಸಿಸಿದ್ದಾರೆ ಎಂದು ಮೋದಿ ನೆನಪಿಸಿಕೊಂಡಿದ್ದಾರೆ. ಭಾರತ ಸ್ವಾತಂತ್ರ್ಯ ಹೋರಾಟ ಅಧಿಕಾರಕ್ಕಾಗಿ ನಡೆದದ್ದಲ್ಲ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಾನವತೆ, ಆಧ್ಯಾತ್ಮಿಕತೆ ಇತ್ತು ಎಂದು ಮೋದಿ ಸ್ಮರಿಸಿಕೊಂಡಿದ್ದಾರೆ.
ಇಲ್ಲಿ 108 ಮಂದಿರಗಳನ್ನು ನಿರ್ಮಾಣ ಮಾಡಲಾಗಿದೆ. ಒಂದೇ ಸ್ಥಳದಲ್ಲಿ 108 ಮಂದಿರಗಳ ದರ್ಶನ ಸಿಗುತ್ತಿದೆ. ಚಿನ್ನಜೀಯರ್ ಶ್ರೀಗಳ ಸ್ನೇಹದಿಂದ ಪೂರ್ಣಾಹುತಿಯಲ್ಲಿ ಭಾಗಿ ಆಗಿದ್ದೇನೆ. ಇದನ್ನು ದೇಶದ ಜನರ ಕನಸು ನನಸಾಗಿಸಲು ಸಮರ್ಪಿಸುವೆ. ಭಾರತದಲ್ಲಿ ಜ್ಞಾನವನ್ನು ಖಂಡನೆ, ಮಂಡನೆ, ಸ್ವೀಕೃತಿ ಮಾಡಲಾಗುತ್ತೆ. ನಮ್ಮಲ್ಲಿ ದ್ವೈತ, ಅದ್ವೈತ ಎರಡೂ ಇವೆ. ರಾಮಾನುಜರ ವಿಶಿಷ್ಟ ಅದ್ವೈತ ಸಿದ್ಧಾಂತ ನಮಗೆ ಪ್ರೇರಣೆ. ರಾಮಾನುಜರ ಭಾಷ್ಯಗಳಲ್ಲಿ ಜ್ಞಾನದ ಪರಾಕಾಷ್ಠೆ ಇದೆ ಎಂದು ಮೋದಿ ಹೇಳಿದ್ದಾರೆ.
ಇದೇ ವೇಳೆ ಹೈದಾರಾಬಾದ್ ಅನ್ನು ಭಾಗ್ಯನಗರ ಎಂದು ಪ್ರಧಾನಿ ನರೇಂದ್ರ ಮೋದಿ ಕರೆದಿದ್ದಾರೆ. ಇಲ್ಲಿ ತೆಲುಗು ಸಂಸ್ಕೃತಿಯನ್ನು ಸಮೃದ್ಧಿಗೊಳಿಸಲಾಗಿದೆ. ರಾಮಾನುಜಾಚಾರ್ಯರ ಬೋಧನೆಗಳು ಸಮಾಜಕ್ಕೆ ದಾರಿದೀಪ ಎಂದು ಹೇಳಿದ್ದಾರೆ. ಈ ವೇಳೆ, ತೆಲುಗು ಚಿತ್ರರಂಗ ಇಡೀ ವಿಶ್ವಕ್ಕೇ ವ್ಯಾಪಿಸಿದೆ ಎಂದೂ ಹೇಳಿಕೆ ನೀಡಿದ್ದಾರೆ.